Saturday, May 18, 2024
spot_imgspot_img
spot_imgspot_img

ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದ ವೈದ್ಯಕೀಯ ಶಿಬಿರದ ರೂವಾರಿ ಡಾ.ಸುರೇಶ್ ಪುತ್ತೂರಾಯರಿಗೆ ರಾಷ್ಟ್ರ ಪ್ರಶಸ್ತಿ…!

- Advertisement -G L Acharya panikkar
- Advertisement -

ಪುತ್ತೂರು: ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದೇವರ ಸೇವೆಯ ಜೊತೆಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತಿರುವ ಪ್ರತಿ ತಿಂಗಳು ನಡೆಸುವ ಉಚಿತ ವೈದ್ಯಕೀಯ ಶಿಬಿರವು ಇಂದು ರಾಷ್ಟ್ರ ಮಟ್ಟದಲ್ಲಿ ತನ್ನ ಕೀರ್ತಿ ಪತಾಕೆಯನ್ನು ಹಾರಿಸಿದೆ. ಮಧುಮೇಹ ತಪಾಸಣೆಯಲ್ಲಿ ನೀಡಿದ ಅದ್ವಿತೀಯ ಸೇವೆ ಹಾಗೂ ಜನರಲ್ಲಿ ಆರೋಗ್ಯ ಜಾಗೃತಿಗಾಗಿ Diabetes Awareness Initiative Award-2024ಕ್ಕೆ ಶಿಬಿರವು ಭಾಜನವಾಗಿದೆ.

ಜ.25ರಂದು ಒರಿಸ್ಸಾದ ಭವನೇಶ್ವರದಲ್ಲಿ ನಡೆದ ಡಯಾಬಿಟೀಸ್ ಇಂಡಿಯಾ 14ನೇ ವಿಶ್ವ ಸಮ್ಮೇಳನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಶಿಬಿರದ ರೂವಾರಿಯಗಿರುವ ಡಾ.ಸುರೇಶ್ ಪುತ್ತೂರಾಯ ಪ್ರಶಸ್ತಿ ಸ್ವೀಕರಿಸಿದರು.

ದೇಹಕ್ಕೆ ಕಾಯಿಲೆ ಬಂದಾಗ ಮಾತ್ರವೇ ಚಿಕಿತ್ಸೆ ಪಡೆಯುವುದಲ್ಲ. ಬದಲಾಗಿ ಮನುಷ್ಯನ ದೇಹಕ್ಕೆ ಬರುವ ಮಧುಮೇಹ, ಅಧಿಕ ರಕ್ತದೊತ್ತಡ ಮೊದಲಾದ ಕಾಯಿಲೆಗಳ ಬಗ್ಗೆ ಆಗಾಗ ತಪಾಸಣೆ ನಡೆಸಿ ಅವುಗಳನ್ನು ಮೂಲದಿಂದಲೇ ನಿವಾರಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್‌ನ ಹೆಸರಾಂತ ವೈದ್ಯ ಡಾ.ಸುರೇಶ್ ಪುತ್ತೂರಾಯರ ಕನಸಿನ ಕೂಸೇ ಉಚಿತ ವೈದ್ಯಕೀಯ ಶಿಬಿರ. ಈ ಯೋಜನೆ 2022ರ ಎಪ್ರೀಲ್ 3ರಂದು ಚಾಲನೆ ದೊರೆತಿದ್ದು ಕಳೆದ 22 ತಿಂಗಳಲ್ಲಿ ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ಉಚಿತ ವೈದ್ಯಕೀಯ ಶಿಬಿರದಲ್ಲಿ ಭಕ್ತರ ಅನುಕೂಲಕ್ಕೆ ತಕ್ಕಂತೆ ವಿಶೇಷ ಚಿಕಿತ್ಸಾ ವಿಧಾನಗಳನ್ನು ಶಿಬಿರದಲ್ಲಿ ಅಳವಡಿಸಿಕೊಂಡು ನುರಿತ ತಜ್ಞ ವೈದ್ಯರ ಮೂಲಕ ತಪಾಸಣೆ, ಚಿಕಿತ್ಸೆಗಳನ್ನು ನೀಡುತ್ತಾ ಬಂದಿರುತ್ತದೆ. ಪ್ರತಿ ತಿಂಗಳ ಶಿಬಿರದಲ್ಲಿಯೂ ಮಧುಮೇಹ ತಪಾಸಣೆಯನ್ನು ನಡೆಸಲಾಗಿದ್ದು ಸಾವಿರಾರು ಮಂದಿ ಶಿಬಿರಾರ್ಥಿಗಳು ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ನವಚೇತನಾ ಯುವಕ ಮಂಡಲ ಹಾಗೂ ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ, ಐಕ್ಯಕಲಾ ಸೇವಾ ಟ್ರಸ್ಟ್ ಮೊಟ್ಟತ್ತಡ್ಕ ಮೊದಲಾದ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಶಿಬಿರವು ಯಶಸ್ವಿಯಾಗಿ ಸಾಗುತ್ತಿದೆ. ಪ್ರತಿ ತಿಂಗಳ ಪ್ರಥಮ ಆದಿತ್ಯವಾರ ನಡೆಯುವ ಶಿಬಿರದಲ್ಲಿ ಪುತ್ತೂರು, ಸುಳ್ಯ ಹಾಗೂ ಮಂಗಳೂರಿನ ನುರಿತ ವೈದ್ಯರುಗಳ ತಂಡ ಪಾಲ್ಗೊಳ್ಳುತ್ತಿದೆ. ಹಲವು ಔಷಧ ಕಂಪನಿಗಳು, ಜನೌಷಧಿ ಕೇಂದ್ರಗಳು, ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ.

ಕಳೆದ 22 ತಿಂಗಳಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರದಲ್ಲಿ ಸುಮಾರು 4200ಕ್ಕೂ ಅಧಿಕ ಫಲಾನುಭವಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು ಸರಾಸರಿಯಾಗಿ 200ಕ್ಕೂ ಅಧಿಕ ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿರುತ್ತಾರೆ. ಸಾರ್ವಜನಿಕರ ಅಪೇಕ್ಷೆ ಹಾಗೂ ಬೇಡಿಕೆಯಂತೆ ವಿವಿಧ ತಪಾಸಣೆಗಳನ್ನು ಶಿಬಿರದಲ್ಲಿ ಅಳವಡಿಕೊಂಡು ನುರಿತ ವೈದ್ಯರ ಮೂಲಕ ತಪಾಸಣೆ ಹಾಗೂ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಶಿಬಿರದ ವಾರ್ಷಿಕ ಸಂಭ್ರಮ ನಡೆದಿದ್ದು ಈ ಸಂದರ್ಭ 12 ವಿಶೇಷ ಪ್ರತ್ಯೇಕ ವಿಭಾಗಳಲ್ಲಿ ಚಿಕಿತ್ಸೆ ಹಾಗೂ ತಪಾಸಣೆಗಳನ್ನು ನಡೆಸಲಾಗಿತ್ತು. ಈ ವರ್ಷವೂ ಮಾರ್ಚ್‌ನಲ್ಲಿ ಎರಡನೇ ವರ್ಷದ ವಾರ್ಷಿಕ ಶಿಬಿರವನ್ನು ನಡೆಸಲಿದೆ.

ಕಳೆದ 22 ತಿಂಗಳುಗಳಿಂದ ನಡೆಯುತ್ತಿರುವ ಶಿಬಿರದಲ್ಲಿ ರೋಗಿಗಳ ಅವಶ್ಯಕತೆಗೆ ಅನುಗುಣವಾಗಿ ತಪಾಸಣೆ, ಚಿಕಿತ್ಸೆ, ಒಂದು ತಿಂಗಳಿಗೆ ಆವಶ್ಯಕವಾದ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಚಿಕಿತ್ಸೆ, ಔಷಧಿಗಳ ಜೊತೆಗೆ ಶಿಬಿರಾರ್ಥಿಗಳಿಗೆ ಬೆಳಗ್ಗಿನ ಉಪಾಹಾರ ಮಧ್ಯಾಹ್ನ ಊಟವನ್ನು ನೀಡಲಾಗುತ್ತಿರುವುದು ಇಲ್ಲಿನ ಶಿಬಿರದ ಇನ್ನೊಂದು ವಿಶೇಷತೆಯಾಗಿದೆ.

ದೇವಸ್ಥಾನದ ವಠಾರದಲ್ಲಿ ನಡೆಯುವ ಶಿಬಿರದಲ್ಲಿ ಆಸ್ಪತ್ರೆಯಲ್ಲಿ ದೊರೆಯುವಂತೆ ಎಲ್ಲಾ ಸೌಲಭ್ಯಗಳು ಒಂದೇ ಕಡೆ ದೊರೆಯುತ್ತಿದೆ. ಚಿಕಿತ್ಸೆ, ತಪಾಸಣೆ ಹಾಗೂ ಔಷಧಿಗಳನ್ನು ಶಿಬಿರದಲ್ಲಿ ಒಂದೇ ಕಡೆ ವಿತರಿಸುವ ಮೂಲಕ ಶಿಬಿರಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿಯಲ್ಲಿ ಉಚಿತವಾಗಿ ದೊರೆಯುತ್ತಿದೆ. ಅಧ್ಯಕ್ಷರಾಗಿ ಪ್ರಸನ್ನ ಕುಮಾರ್ ಮಾರ್ತ, ಗೌರವಾಧ್ಯಕ್ಷರಾಗಿ ಅರುಣ್ ಕುಮಾರ್ ಪುತ್ತಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯ ಕುಮಾರ್ ರೈ ಎಸ್ ಹಾಗೂ ಇತರ ಪದಾಧಿಕಾರಿಗಳನ್ನು ಒಳಗೊಂಡ ಆರೋಗ್ಯ ರಕ್ಷಾ ಸಮಿತಿ ಕಾರ್ಯನಿರ್ವಹಿಸುತ್ತಿದೆ.

- Advertisement -

Related news

error: Content is protected !!