ನೆಲ್ಯಾಡಿ:- ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ಸಮೀಪದ ಪೆರಿಯಶಾಂತಿ ಬಳಿ ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಒಂಟಿ ಸಲಗ ಈ ಹಿಂದಿನ ದಿನಗಳಲ್ಲಿ ಇಲ್ಲಿನ ಜನರ ನಿದ್ದೆಗೆಡಿಸಿದರೆ, ಇದೀಗ ನಾಲ್ಕು ಕಾಡಾನೆಗಳ ಗುಂಪೊಂದು ಕೃಷಿ ಪ್ರದೇಶಗಳಿಗೆ ನುಗ್ಗಿ ಭತ್ತ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ನಾಶ ಮಾಡುತ್ತಿದೆ.
ನೆಲ್ಯಾಡಿಯ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಿಯಶಾಂತಿ, ಮಣ್ಣಗುಂಡಿ ಪರಿಸರದಲ್ಲಿ ಹಲವು ಸಮಯಗಳಿಂದ ಒಂಟಿ ಕಾಡಾನೆಯೊಂದು ಓಡಾಡುತ್ತಿದ್ದು, ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡುತ್ತಿತ್ತು. ಆದರೆ ಇದೀಗ ಎರಡು ದಿನಗಳಿಂದ ನಾಲ್ಕು ಆನೆಗಳ ಹಿಂಡು ಈ ಪ್ರದೇಶದಲ್ಲಿ ಕೃಷಿಕರ ನಿದ್ದೆಗೆಡಿಸಿದೆ.ಇದರಿಂದಾಗಿ ಜನರು ಭಯದಲ್ಲೇ ದಿನದೂಡುವಂತಾಗಿದೆ.
ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಆನೆಗಳ ಹಿಂಡು ಭತ್ತದ ಗದ್ದೆ, ಬಾಳೆ, ತೆಂಗಿನ ಗಿಡಗಳನ್ನು ತುಳಿದು ಸಂಪೂರ್ಣವಾಗಿ ನಾಶಮಾಡುತ್ತಿದೆ.ಇದೀಗ ಈ ನಾಲ್ಕು ಆನೆಗಳ ಹಿಂಡು,ಕೆಲವು ದಿನಗಳ ಹಿಂದೆ ಒಂಟಿ ಸಲಗ ಕೃಷಿ ನಾಶ ಮಾಡಿದ ಪೆರಿಯಶಾಂತಿ ಸಮೀಪದ ಮಣ್ಣಗುಂಡಿಯ ಸೇಸಪ್ಪ, ತೋಮಸ್, ಹಮೀದ್,ಇಬ್ರಾಹಿಂ, ನಾರಾಯಣ ಎಂಬುವವರ ತೋಟಗಳಿಗೆ ಮತ್ತು ದೇವದಾಸ್,ಹೊನ್ನಪ್ಪ ಎಂಬವರ ಗದ್ದೆಗೆ ನುಗ್ಗಿ ಕೃಷಿ ಸಂಪೂರ್ಣ ನಾಶ ಮಾಡಿದೆ. ಕಾಡಾನೆಗಳ ಈ ರಾಜಾರೋಷ ಸಂಚಾರ ಹಾಗೂ ಕೃಷಿ ನಾಶಗೊಳಿಸುವಿಕೆಯಿಂದಾಗಿ ಇದೀಗ ಸ್ಥಳೀಯರಲ್ಲಿ ಆತಂಕ ಎದುರಾಗಿದೆ.ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿ, ಗಮನಕ್ಕೆ ತಂದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.