ನೆಲ್ಯಾಡಿ: ಮಹಾಮಾರಿ ಕೋವಿಡ್ ಗೆ ಒಂದೇ ದಿನ ದಂಪತಿಗಳಿಬ್ಬರು ಮೃತ ಪಟ್ಟಿರುವ ಘಟನೆ ನೆಲ್ಯಾಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮದ ಪುನ್ನತ್ ನಾಥ್ ನಿವಾಸಿ ,ಕೃಷಿಕ ವರ್ಗೀಸ್ ಪಿ. ವಿ. (74) ಹಾಗೂ ಅವರ ಪತ್ನಿ ಮೇರಿ ವರ್ಗೀಸ್ ಪಿ. ವಿ. (73) ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಜೂ. 25 ರಂದು ದಂಪತಿಗಳಿಬ್ಬರಿಗೂ ಜ್ವರ ಬಂದಿದ್ದು, ಬಳಿಕ ಔಷಧಿ ಪಡೆದು ಗುಣಮುಖರಾಗಿದ್ದರು. ಜು. 4ರಂದು ಅವರಿಗೆ ಮತ್ತೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಜ್ಯೋತಿ ಆಸ್ಪತ್ರೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಫಾದರ್ ಮುಲ್ಲಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಪಾಸಣೆ ವೇಳೆ ಅವರಿಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿತ್ತು.
ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದ ಇವರಿಬ್ಬರ ಪೈಕಿ ಜು. 15ರಂದು ಮಧ್ಯಾಹ್ನ 1.30 ರ ವೇಳೆಗೆ ಮೇರಿ ವರ್ಗೀಸ್ ರವರು ನಿಧನರಾಗಿದ್ದು, ಸಂಜೆ 7 ಗಂಟೆ ವೇಳೆಗೆ ವರ್ಗೀಸ್ ಪಿ, ವಿ. ಯವರು ನಿಧನರಾದರು. ಮೃತರು ಪುತ್ರರಾದ ಬೆಳ್ತಂಗಡಿ ಮುಂಡಾಜೆ ಚರ್ಚ್ನ ಧರ್ಮಗುರು ರೆ. ಫಾ. ಸೆಬಾಸ್ಮಿನ್, ಸುರೇಶ್ ಜಾರ್ಜ್,ಪುತ್ರಿಯರಾದ ಲಕ್ಷ್ಮೀ, ದೀಪ್ತಿ ಯವರನ್ನು ಆಗಲಿದ್ದಾರೆ. ಜು.16ರಂದು ಇಬ್ಬರ ಮೃತ ದೇಹದ ಅಂತ್ಯಕ್ರಿಯೆ ನೆಲ್ಯಾಡಿ ಸಂತ ಅಲೋನ್ಸ್ ಚರ್ಚ್ನಲ್ಲಿ ಕೋವಿಡ್ ನಿಯಮಾವಳಿಯಂತೆ ನಡೆಯಿತು.