ನವದೆಹಲಿ: ಕೊವಿಡ್ 19ರ ಹೋರಾಟಕ್ಕೆ ಬಳಸುತ್ತಿರುವ ವಸ್ತುಗಳ ಬೆಲೆ ಕಡಿಮೆ ಇರಲು ಲಸಿಕೆಗೆ ಶೇಕಡಾ 5ರಷ್ಟು ಮತ್ತು ಔಷಧ ಮತ್ತು ಆಕ್ಸಿಜನ್ ಕಾನ್ಸ್ಟ್ರೇಟರ್ಗಳ ಮೇಲೆ ಶೇಕಡಾ 12ರಷ್ಟು ತೆರಿಗೆ ಅನಿವಾರ್ಯ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊವಿಡ್ ಸಂಬಂಧಿತ ಔಷಧ, ಆಮ್ಲಜನಕದ ಸಿಲಿಂಡರ್ಗಳ ಮೇಲಿನ ಜಿಎಸ್ಟಿ ಮತ್ತು ಕಸ್ಟಮ್ ಸುಂಕ ರದ್ದುಗೊಳಿಸುವಂತೆ ಮಾಡಿರುವ ಮನವಿಗೆ ಕೇಂದ್ರ ಹಣಕಾಸು ಸಚಿವೆ 16 ಸರಣಿ ಟ್ವೀಟ್ಗಳ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.
ಕೊವಿಡ್ ವಿರುದ್ಧದ ಹೋರಾಟಕ್ಕೆ ಬಳಸುತ್ತಿರುವ ಈ ಉತ್ಪನ್ನಗಳಿಗೆ ಜಿಎಸ್ಟಿಯಿಂದ (ಸರಕು ಮತ್ತು ಸೇವಾ ತೆರಿಗೆ) ಸಂಪೂರ್ಣ ವಿನಾಯಿತಿ ನೀಡಿದರೆ, ಈ ಉತ್ಪನ್ನಗಳ ದೇಶೀಯ ಉತ್ಪಾದಕರು ತಮ್ಮ ಒಳಹರಿವಿನ ಸೇವೆಗಳಿಗೆ ಪಾವತಿಸುವ ತೆರಿಗೆಯನ್ನು ಸರಿದೂಗಿಸಲು ಸಾಧ್ಯವಾಗುವುದಿಲ್ಲ.
ಹಾಗಾದಲ್ಲಿ ಅಂತಿಮವಾಗಿ ವಸ್ತುವಿನ ಬೆಲೆ ಹೆಚ್ಚಿಸಬೇಕಾಗುತ್ತದೆ. ಇದು ಗ್ರಾಹಕರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಈಗಾಗಲೇ ವಿದೇಶಗಳಿಂದ ಆಮದಾಗುವ ಕೊವಿಡ್ ಔಷಧಗಳ ಮೇಲಿನ ತೆರಿಗೆಗೆ ವಿನಾಯತಿ ನೀಡಲಾಗಿದೆ. ಈ ಮೂಲಕ ಲಸಿಕೆ, ಮೆಡಿಕಲ್ ಆಕ್ಸಿಜನ್ ಮುಂತಾದ ಉತ್ಪನ್ನಗಳ ಬೆಲೆ ಇಳಿಕೆ ಮಾಡುವಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಅವರು ಟ್ವೀಟ್ನಲ್ಲಿ ವಿವರಿಸಿದ್ದಾರೆ.