ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರದ ಆರೋಪ ಹೊತ್ತು ಭಾರತದಿಂದ ಪರಾರಿಯಾಗಿ ‘ಕೈಲಾಸ’ ಎಂಬ ಕಾಲ್ಪನಿಕ ದೇಶವನ್ನು ಕಟ್ಟಿಕೊಂಡಿರುವುದು ಗೊತ್ತೇ ಇದೆ. ವಿಶ್ವಸಂಸ್ಥೆಯಲ್ಲಿ ಹಾಜರಾದ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಪ್ರತಿನಿಧಿಗೆ ವಿಶ್ವಸಂಸ್ಥೆ ಬಿಗ್ ಶಾಕ್ ನೀಡಿದೆ. ನಿತ್ಯಾನಂದನ ಕಾಲ್ಪನಿಕ ದೇಶವನ್ನು ಸ್ವೀಕರಿಸಲು ವಿಶ್ವಸಂಸ್ಥೆ ನಿರಾಕರಿಸಿದೆ.
ಫೆಬ್ರವರಿ 24 ರಂದು ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗವಹಿಸಿದ್ದರು. ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿಯಾಗಿ ಶಿಷ್ಯೆ ವಿಜಯಪ್ರಿಯಾ ಭಾಗಿಯಾಗಿದ್ದರು. ಈ ಸಭೆಯಲ್ಲಿ ವಿಜಯಪ್ರಿಯಾ ಭಾರತದ ವಿರುದ್ಧ ವಿಷವನ್ನು ಉಗುಳಿದ್ದರು. ಮಾತ್ರವಲ್ಲ ನಿತ್ಯಾನಂದರನ್ನು ಹಿಂದೂ ಧರ್ಮದ ಪರಮೋಚ್ಚ ಗುರು ಎಂದು ಕರೆದಿದ್ದರು. ನಿತ್ಯಾನಂದ ತನ್ನ ಶಿಷ್ಯಯನ್ನು ವಿಶ್ವಸಂಸ್ಥೆಗೆ ಕಳುಹಿಸಿ ಭಾರತದ ವಿರುದ್ಧ ಮಾತನಾಡುತ್ತಿದ್ದಂತೆಯೇ ವ್ಯಾಪಕ ಚರ್ಚೆಗಳು ಶುರುವಾಗಿದ್ದವು.
ಇದೀಗ ಈ ವಿಚಾರದಲ್ಲಿ ವಿಶ್ವಸಂಸ್ಥೆಯು ಮೌನ ಮುರಿದಿದ್ದು, UN ಸಭೆಯಲ್ಲಿ ನಿತ್ಯಾನಂದನ ದೇಶ ‘ಕೈಲಾಸ’ ಎನ್ಜಿಒ ಆಗಿ ಭಾಗವಹಿಸಿದೆ. ನಿತ್ಯಾನಂದನ ಪ್ರತಿನಿಧಿ ವಿಜಯಪ್ರಿಯಾ ಇಲ್ಲಿ ಏನೇ ಹೇಳಿದರೂ ಅದನ್ನು ಪರಿಗಣಿಸುವುದಿಲ್ಲ. ಮತ್ತು ಸಂಬಂಧಪಟ್ಟ ಸಮಿತಿಯ ಮುಂದೆ ಅದನ್ನು ಕಳುಹಿಸುವುದಿಲ್ಲ ಎಂದು ವಿಶ್ವಸಂಸ್ಥೆ ಸ್ಪಷ್ಟನೆ ನೀಡಿದೆ.
ಫೆಬ್ರವರಿ 24 ರಂದು ನಡೆದ ಸಭೆಯು ಬಹಿರಂಗ ಸಭೆಯಾಗಿದ್ದು, ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಸಭೆಯ ಮುಂದೆ ಕೇಳಲಾದ ಪ್ರಶ್ನೆಗಳು ಹಾಗೂ ಆರೋಪಗಳನ್ನು ವಿಶ್ವಸಂಸ್ಥೆಯ ತಜ್ಞರು ಪರಿಶೀಲನೆ ಮಾಡುತ್ತಾರೆ. ಆದರೆ ಕೈಲಾಸದ ಅಭಿಪ್ರಾಯಗಳನ್ನು ವಿಶ್ವಸಂಸ್ಥೆಯು ಪರಿಗಣಿಸುವುದಿಲ್ಲ ಎಂದು ಹೇಳಿದೆ.
ಈ ಮೂಲಕ ಕೈಲಾಸಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆ ಎಂದು ಹೇಳಿಕೊಂಡಿದ್ದ ನಿತ್ಯಾನಂದ ಸ್ವಾಮಿ. ಆದರೆ ವಾಸ್ತವತೆ ಬೇರೆಯೇ ಇದೆ. ಇದು ವಾಸ್ತವಾಗಿ ಸಾಮ್ಯಾನ್ಯ ಸಭೆ ಅಥವಾ ಇನ್ಯಾವುದೇ ಸದಸ್ಯ ದೇಶಗಳ ಸಭೆಯಲ್ಲ. ಬದಲಾಗಿ ವಿಶ್ವಸಂಸ್ಥೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಸಮಿತಿಯು ಇತ್ತೀಚಿಗೆ ಚಿನೇವಾದಲ್ಲಿ ಹಮ್ಮಿಕೊಂಡ ಸಾಮಾನ್ಯ ಸಮಾಲೋಚನಾ ಸಭೆಯಾಗಿತ್ತು. ಇದನ್ನೇ ವಿಶ್ವ ಸಂಸ್ಥೆ ಸಭೆ. ಇದರಿಂದ ಕೈಲಾಸ ದೇಶಕ್ಕೆ ಮಾನ್ಯತೆ ನೀಡಲಾಗಿದೆ ಎಂದ ತಪ್ಪು ಮಾಹಿತಿ ರವಾನಿಸುವ ಕೆಲಸ ಮಾಡಿದ್ದಾರೆ.