ಮಂಗಳೂರು : ಸೌಹಾರ್ದ ಸಹಕಾರ ರಂಗದ ಬೆಳವಣಿಗೆಗೆ ಸಲ್ಲಿಸಿರುವ ಅನುಪಮ ಸೇವೆಯನ್ನು ಪರಿಗಣಿಸಿ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ಎ.ಸುರೇಶ್ ರ್ರೈ ಅವರನ್ನು ರಾಜ್ಯ ಸರಕಾರ “ಸಹಕಾರ ರತ್ನ” ಪ್ರಶಸ್ತಿಗೆ ಆಯ್ಕೆ ಮಾಡಿರುತ್ತದೆ.
ದಿನಾಂಕ ೨೦-೧೧-೨೦೨೩ರಂದು ವಿಜಯಪುರದಲ್ಲಿ ಜರಗಲಿರುವ ೭೦ನೇ ಅಖಿಲ ಭಾರತ ಸಹಕಾರ ಸಪ್ತಾಹದ ರಾಜ್ಯ ಮಟ್ಟದ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯ ಅವರು ಶ್ರೀ ಎ.ಸುರೇಶ್ ರೈಯವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
೨೦೧೧ರಲ್ಲಿ ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿ ನಿಯಮಿತ ಎಂಬ ಸಂಘಟಿತವಾದ ಸೌಹಾರ್ದ ಸಹಕಾರ ಸಂಸ್ಥೆಯನ್ನು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಪ್ರಾರಂಭಿಸಿ, ಗೌರವ ಮಾರ್ಗದರ್ಶಕರಾಗಿ ಸಾಧ್ವೀ ಶ್ರೀ ಶ್ರೀ ಮಾತಾನಂದಮಯಿಯವರು ಮತ್ತು ಅಧ್ಯಕ್ಷರಾಗಿ ಶ್ರೀ ಎ.ಸುರೇಶ್ ರೈಯವರ ಮುಂದಾಳತ್ವದಲ್ಲಿ ಪ್ರಾರಂಭವಾದ ಸಂಸ್ಥೆಯು ಕೇವಲ ೧೩ ವರ್ಷಗಳ ಅವಧಿಯಲ್ಲಿ ೧೯ ಶಾಖೆಗಳ ಮೂಲಕ ರೂ.೨೬೬.೦೦ ಕೋಟಿ ಠೇವಣಿ ಸಂಗ್ರಹಿಸಿ, ರೂ.೨೦೮.೦೦ ಕೋಟಿ ಹೊರ ಬಾಕಿ ಸಾಲದೊಂದಿಗೆ ರೂ.೩.೨೨ ಕೋಟಿ ಲಾಭ ಗಳಿಸಿರುತ್ತದೆ.
ದ.ಕ ಮತ್ತು ಉಡುಪಿ ಜಿಲ್ಲೆಗಳಲ್ಲಿ ೬೮೫೦ ವಿಕಾಸವಾಹಿನಿ ಸ್ವ-ಸಹಾಯ ಗುಂಪುಗಳಲ್ಲಿ ಒಟ್ಟು ೬೮,೦೦೦ ಕ್ಕೂ ಮಿಕ್ಕಿ ಸದಸ್ಯರು ಸಹಕಾರಿಯ ಸೇವೆಯನ್ನು ಅನುಭವಿಸುತ್ತಿದ್ದಾರೆ. ಸಹಕಾರಿಯ ಆರು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಎಲ್ಲಾ ಶಾಖೆಗಳು ಗಣಕೀಕೃತಗೊಳಿಸಿ ಕೋರ್ ಸಿಸ್ಟಂ ಅಳವಡಿಸಲಾಗಿದೆ.
ಲೆಕ್ಕಪರಿಶೋಧನೆಯಲ್ಲಿ ಎ’ಗ್ರೇಡ್ ಶ್ರೇಣಿಯನ್ನು ಪಡೆದುಕೊಂಡು, ತನ್ನ ಸದಸ್ಯರಿಗೆ ಪ್ರತಿ ವರ್ಷವೂ ೧೫% ಡಿವಿಡೆಂಡ್ ನೀಡುತ್ತಾ ಬಂದಿದೆ. ವಿಕಾಸವಾಹಿನಿ ಸ್ವಸಹಾಯ ಗುಂಪು ಗ್ರಾಮವಿಕಾಸ ಯೋಜನೆಯಲ್ಲಿ ಹಾಗೂ ಸಹಕಾರಿಯಲ್ಲಿ ಒಟ್ಟು ೪೫೦ಕ್ಕೂ ಮಿಕ್ಕಿ ಸಿಬ್ಬಂದಿಗಳು ದುಡಿಯುತ್ತಿದ್ದಾರೆ. ಕೃಷಿ ಕ್ಷೇತ್ರವನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರಿಯ ಸಿಬ್ಬಂದಿಗಳಿಗೆ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ತರಬೇತಿ ಕೊಡಿಸಿ, ಕೃಷಿಕರಿಗೆ ನೆರವಾಗುವಂತೆ ಮಾಡಿರುವ ಸಾಧನೆ ಅನುಪಮವಾಗಿದೆ. ಸಾವಯವ ಕೃಷಿಯ ಬಗ್ಗೆ ರೈತರಿಗೆ ತೋಟದಲ್ಲಿ ಪಾಠ ವಿಶಿಷ್ಠ ತರಬೇತಿ ಕಾರ್ಯಕ್ರಮಗಳನ್ನು ಸ್ವತ: ಸಹಕಾರಿಯ ಆಧ್ಯಕ್ಷರಾದ ಶ್ರೀ ಎ.ಸುರೇಶ್ ರೈಯವರೇ ನೀಡಿರುತ್ತಾರೆ.