ಆನ್ ಲೈನ್ ತರಗತಿಗಳನ್ನು ಪರಿಣಾಮಕಾರಿಯನ್ನಾಗಿಸಲು ಶಿಕ್ಷಕರಿಗಿಂತ ಹೆತ್ತವರ ಜವಾಬ್ದಾರಿ ಹಿರಿದಾದುದು. ಮನೆಯಲ್ಲಿ ಕುಳಿತು ಮೊಬೈಲ್ ಮೂಲಕ ಪಠಣ ಮಾಡುವ ಮಕ್ಕಳತ್ತ ನಿಗಾ ಇಟ್ಟು ಶೈಕ್ಷಣಿಕವಾಗಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಜವಾಬ್ದಾರಿಯೂ ಪಾಲಕರ ಮೇಲಿದೆ ಎಂದು ಬಂಟ್ವಾಳ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಅವರು ಹೇಳಿದರು.
ಅವರು ಸೋಮವಾರ (07/09/20) ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ಪಾಲಕರ ಸಭೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಉಕ್ಕುಡ ಶಾಲೆಯ ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಶಾಲಾ ಚಟುವಟಿಕೆಗಳು ಹಂತಹಂತವಾಗಿ ಮುಂದುವರಿಯುತ್ತಿದ್ದು, ಮುಂದಿನ ಕೆಲವೇ ಸಮಯದಲ್ಲಿ ತರಗತಿ ಆರಂಭವಾಗುವ ಮುನ್ಸೂಚನೆಯನ್ನು ಸರಕಾರ ನೀಡಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಪೂರ್ವ ತಯಾರಿ ನಡೆಸುವ ಕೆಲಸ ತುರ್ತಾಗಿ ಆಗಬೇಕಾಗಿದೆ ಎಂದು ಅಬ್ದುಲ್ ರಝಾಕ್ ಅನಂತಾಡಿ ಹೇಳಿದರು.
ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾಸಂಸ್ಥೆ ಸುಸೂತ್ರವಾಗಿ ಮುನ್ನಡೆಯಬೇಕಾದರೆ ಆಡಳಿತ ಮಂಡಳಿ, ಪಾಲಕರು ಹಾಗೂ ಶಿಕ್ಷಕರು ಸಮಾನ ಮನಸ್ಕರಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು.
ವಿಟ್ಲ ಟೋಪ್ಕೋ ಜ್ಯುವೆಲ್ಲರಿ ಮಾಲಕರಾದ ಮಹಮ್ಮದ್ ಟಿ.ಕೆ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶಾಲೆಗೆ ಒಂದು ಲಕ್ಷ ರೂಪಾಯಿ ದೇಣಿಗೆಯ ಚೆಕ್ಕನ್ನು ಹಸ್ತಾಂತರಿಸಿದರು. ನೂತನ ಸದಸ್ಯರಾದ ಬಿ.ಕೆ. ಅಬ್ದುಲ್ಲ ಕುಂಞಿ ಹಾಜಿ ಬೈರಿಕಟ್ಟೆ ಹಾಗೂ ಮಹಮ್ಮದ್ ಟಿ.ಕೆ. ಅವರನ್ನು ಗೌರವಿಸಲಾಯಿತು. ಉಕ್ಕುಡ ಶಾಲೆಯ ಪ್ರತಿಭಾನ್ವಿತ ಹಳೆ ವಿದ್ಯಾರ್ಥಿಗಳಾದ ಹಲೀಮತುಲ್ ಸಅದಿಯಾ, ನಿವೇದಿತಾ, ಮಹಮ್ಮದ್ ಆಶಿಕ್ ಅಫ್ತಾಬ್, ಮಹಮ್ಮದ್ ಆಸಿಫ್, ಆಶಿಕಾ, ಸುಮಯ್ಯತ್ ರಫೀಕಾ, ಡಿ.ಕೆ. ಫಾತಿಮತ್ ಇಶಾ, ಸಲಾಮತುಲ್ ಫಾಯಿಝಾ, ಅಬ್ದುಲ್ ಸಲಾಮ್ ಝಹೀಫ್, ಫಾತಿಮಾ ಹೈಫಾ, ಅಫ್ಫಾನ್, ಝಮೀರ್ ಅವರನ್ನು ಸ್ಮರಣಿಕೆಯೊಂದಿಗೆ ಅಭಿನಂದಿಸಲಾಯಿತು.
ಉಕ್ಕುಡ ಶಾಲೆಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಟಿ.ಎಚ್.ಎಂ.ಎ., ಕಾರ್ಯದರ್ಶಿ ಹನೀಫ್ ಕುದ್ದುಪದವು, ಸಂಚಾಲಕ ಅಬೂಬಕರ್ ಟೆಲಿಫೋನ್, ಜೊತೆ ಕಾರ್ಯದರ್ಶಿ ಮುನೀರ್ ದರ್ಬೆ, ಕೋಶಾಧಿಕಾರಿ ಅನ್ವರ್ ಉಕ್ಕುಡ, ಉಪಾಧ್ಯಕ್ಷ ಅಬ್ಬಾಸ್ ಕಲ್ಲಂಗಳ, ಸದಸ್ಯ ಸಿದ್ದೀಕ್ ಆಲಂಗಾರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕರಾದ ಆಯಿಷತಿಲ್ ಆರಿಫಾ, ಶಿಕ್ಷಕರಾದ ಪವಿತ್ರ, ಜ್ಯೋತ್ಸ್ನಾ, ಆಬಿದಾ, ದಿವ್ಯಾ, ರಶೀದಾ ಬೇಗಮ್, ಪರಮೇಶ್ವರಿ ಉಪಸ್ಥಿತರಿದ್ದರು.