ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿ-ಕುಮಟಾ ರಸ್ತೆಯ ಅಗಲೀಕರಣವನ್ನು ವಿರೋಧಿಸಿ ರಾಜ್ಯ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಸಾಗರಮಾಲಾ ಯೋಜನೆಯಡಿ ಬೇಲೇಕೇರಿ ಬಂದರನ್ನು ರಾಜ್ಯದ ಇತರ ನಗರಗಳ ಜೊತೆ ಸಂಪರ್ಕ ಕಲ್ಪಿಸುವ ಈ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಅರಣ್ಯ ನಾಶವಾಗುವುದರಿಂದ ಇದನ್ನು ಕೈಬಿಡಬೇಕು ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಬೆಂಗಳೂರಿನ ಎನ್ಜಿಓ ಒಂದು ಈ ಅರ್ಜಿ ಸಲ್ಲಿಸಿದ್ದು ಅದರ ಇತರ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದೆ. ಈ ಯೋಜನೆಯಲ್ಲಿ ಭಾರಿ ಪ್ರಮಾಣದಲ್ಲಿ ಮರಗಳನ್ನು ಕತ್ತರಿಸಬೇಕಾಗಿದ್ದು, ಸಿಂಗಳಿಕಗಳಿಗೆ ಆಶ್ರಯತಾಣವಾಗಿರುವ ಶರಾವತಿ ಕಣಿವೆಯ 1.5 ಕಿ.ಮಿ. ಪ್ರದೇಶದಲ್ಲಿ ಈ ರಸ್ತೆ ಹಾದು ಹೋಗುತ್ತದಲ್ಲದೇ 2 ಲಕ್ಷ ಮರಗಳನ್ನು ನಾಶಪಡಿಸಬೇಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಎನ್ಎಚ್ಎಐ) ಈಗ 5.5 ಮೀಟರ್ ಅಗಲವಿರುವ ಈ ರಸ್ತೆಯನ್ನು 18 ಮೀಟರ್ ಅಗಲ ಮಾಡುತ್ತಿದೆ. ಈ ರಸ್ತೆಯಲ್ಲಿ ಅತ್ಯಂತ ವಿರಳ ವಾಹನ ಸಂಚಾರವಿದ್ದು ಪಶ್ಚಿಮ ಘಟ್ಟದ ನಿತ್ಯಹರಿದ್ವರ್ಣ ಕಾಡಿನ ನಡುವೆ ಈ ರಸ್ತೆ ಹಾದು ಹೋಗುತ್ತಿದೆ. ಪರಿಸರದ ಮೇಲಿನ ವ್ಯತಿರಿಕ್ತ ಪರಿಣಾಮವನ್ನು ಪರಿಗಣಿಸದೇ ಅವೈಜ್ಞಾನಿಕ ರೀತಿಯಲ್ಲಿ ಈ ರಸ್ತೆಯನ್ನು ಅಗಲಿಕರಣ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಪರಿಸರಕ್ಕೆ ಭಾರಿ ಹಾನಿ ಉಂಟುಮಾಡುವ ಈ ಯೋಜನೆಗೆ ಅನುಮತಿ ನೀಡಲೇಬಾರದು ಎಂದು ಅರ್ಜಿಯಲ್ಲಿ ವಾದಿಸಲಾಗಿದ್ದು ತಕ್ಷಣ ಈ ರಸ್ತೆ ಅಗಲಿಕರಣ ಕಾಮಗಾರಿಯನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು
ತಿಳಿಸಿವೆ.