ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ, ನಿಂದನೆ, ಅವಮಾನ ಮತ್ತು ಮಾನಿಹಾನಿಕರ ಹೇಳಿಕೆ ನೀಡುವುದು, ಪ್ರಕಟಿಸುವುದು ಹಾಗೂ ಪ್ರಸಾರ ಮಾಡುವುದರ ವಿರುದ್ಧ ಕೇರಳ ಸರ್ಕಾರ ಹೊಸ ಕಾನೂನೊಂದನ್ನು ರೂಪಿಸಿದೆ.
ಜನರ ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಡಲಿ ಪೆಟ್ಟು ನೀಡುವಂಥ ಕ್ರಮಕ್ಕೆ ಕೇರಳ ಸರ್ಕಾರ ಮುಂದಾಗಿದೆ.
ಐಟಿ ಆ್ಯಕ್ಟ್ 66A ಜಾಗದಲ್ಲಿ ಇದೀಗ 118-A ಕಾಯ್ದೆಯನ್ನು ತರಲಾಗಿದ್ದು ಈ ಕಾನೂನಿನ ಪ್ರಕಾರ ಸೋಷಿಯಲ್ ಮೀಡಿಯಾಗಳಲ್ಲಿ ಬೆದರಿಕೆ, ನಿಂದನೀಯ, ಅವಮಾನಕರ ಅಥವಾ ಮಾನಹಾನಿಕರ ಬೆದರಿಕೆ, ನಿಂದನೆ, ಅವಮಾನ ಮತ್ತು ಮಾನಿಹಾನಿಕರವಾಗಿ ನಡೆದುಕೊಂಡವರಿಗೆ 5 ವರ್ಷ ಜೈಲು ಶಿಕ್ಷೆ ಅಥವಾ 10,000 ದಂಡ ವಿಧಿಸಲಾಗುತ್ತದೆ ಅಥವಾ ಎರಡನ್ನೂ ವಿಧಿಸುವ ಅಧಿಕಾರ ಕೋರ್ಟ್ಗೆ ಇರುತ್ತದೆ. ಇನ್ನು ಈ ಹಿಂದೆ ಇದ್ದ ಐಟಿ ಆ್ಯಕ್ಟ್ 66Aನಲ್ಲಿ ಜಾಮೀನು ರಹಿತ ಮಾಡಲಾಗಿತ್ತು. ಈಗಿನ 118-Aನಲ್ಲಿ ಜಾಮೀನು ಸಹಿತ ಎಂದು ಬದಲಿಸಲಾಗಿದೆ.
ಈ ಹೊಸ ಕಾನೂನಿಗೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹ ಸಹಿ ಹಾಕಿದ್ದಾರೆ. ಹೊಸ ಕಾನೂನು ರೂಪಿಸಿರುವ ಕೇರಳ ಸರ್ಕಾರದ ವಿರುದ್ಧ ಪರ ವಿರೋಧಗಳೂ ವ್ಯಕ್ತವಾಗಿವೆ. ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಟ್ವೀಟ್ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಆಕ್ರಮಣಕಾರಿ ಪೋಸ್ಟ್ ಮಾಡಿದವರಿಗೆ 5 ವರ್ಷ ಶಿಕ್ಷೆ ನೀಡುವ ಈ ಕಾನೂನ್ನು ಕೇರಳದ ಲೆಫ್ಟ್ ಡೆಮಾಕ್ರೆಟಿಕ್ ಫ್ರಂಟ್ ರೂಪಿಸಿರುವುದು ಆಘಾತಕಾರಿ ಎಂದಿದ್ದಾರೆ.
ಇನ್ನು ತಮ್ಮ ಹೊಸ ಕಾನೂನಿನ ಕುರಿತು ಸ್ಪಷ್ಟನೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಕೇರಳ ಪೊಲೀಸ್ ಆ್ಯಕ್ಟ್ಗೆ ಮಾಡಿರುವ ತಿದ್ದುಪಡಿಯನ್ನು ವಾಕ್ ಸ್ವಾತಂತ್ರವನ್ನೂ ಕಸಿಯುವುದಕ್ಕಾಗಲೀ ಮತ್ತು ನಿಷ್ಪಕ್ಷಪಾತ ಮಾಧ್ಯಮಗಳ ವಿರುದ್ಧ ಪ್ರಯೋಗಿಸುವುದಕ್ಕಾಗಲೀ ಬಳಸುವುದಿಲ್ಲ. ಸಂವಿಧಾನ ಹಾಗೂ ಕಾನೂನಿನ ಮಿತಿಯಲ್ಲಿ ಬಲವಾಗಿ ಟೀಕಿಸಲು ಪ್ರತಿಯೊಬ್ಬರಿಗೂ ಅವಕಾಶವಿದೆ ಎಂದು ಹೇಳಿದ್ದಾರೆ.