ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಬಡಗಕಜೆಕಾರು ಗ್ರಾ.ಪಂ.ವ್ಯಾಪ್ತಿಯ ಪಾಂಡವರಕಲ್ಲು ಶ್ರೀ ಬ್ರಹ್ಮ ಬೈದರ್ಕಳ ಗರೊಡಿಯ ಅಂಗಣಕ್ಕೆ ದುಷ್ಕರ್ಮಿಗಳು ಗಾಜಿನ ಬಾಟಲ್ ಒಡೆದು ಗಾಜಿನ ಚೂರುಗಳನ್ನು ಹಾಕಿ ದುಷ್ಕೃತ್ಯ ನಡೆಸುದ ಘಟನೆ ಮೇ 14 ರಂದು ಸಂಭವಿಸಿದೆ.
ಘಟನೆಯ ಬಗ್ಗೆ ಮೇ 14 ರಂದು ರಾತ್ರಿ ಸಾರ್ವಜನಿಕರ ಗಮನಕ್ಕೆ ಬಂದಿದ್ದು,ಕಿಡಿಗೇಡಿಗಳ ಈ ದುಷ್ಕೃತ್ಯವನ್ನು ಖಂಡಿಸಿದ್ದಾರೆ. ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಪಾಂಡವರಕಲ್ಲು ಗರಡಿ ಕ್ಷೇತ್ರ ಪುರಾತನ ಇತಿಹಾಸವುಳ್ಳ ಕ್ಷೇತ್ರವಾಗಿದೆ.ಇದು ಹಿಂದೂ ಧರ್ಮಿಯರ ಮಾತ್ರವಲ್ಲದೆ ಅನ್ಯಧರ್ಮಿಯರ ನಂಬಿಕೆಯ ಕ್ಷೇತ್ರವಾಗಿದೆ.ಇಲ್ಲಿನ ಕಾರಣಿಕ ಕೇವಲ ಬಾಯಿ ಮಾತಿನಲ್ಲಿ ಮಾತ್ರವಲ್ಲದೆ ಇದನ್ನು ಕಣ್ಣಾರೆ ಕಂಡ ಅನೇಕ ಸಾಕ್ಷಿಗಳಿವೆ.ಇಂತಹ ಕಾರಣಿಕದ ಕ್ಷೇತ್ರದೊಳಗೆ ಶ್ರೀ ಕೊಡಮಣಿತ್ತಾಯ , ಶ್ರೀ ಪಿಲಿಚಾಮುಂಡಿ ಮತ್ತು ಬ್ರಹ್ಮಬೈದೆರ್ಕಳ ದೈವಸ್ಥಾನವಿದ್ದು ಅದರ ಸುತ್ತಲೂ ಕಿಡಿಗೇಡಿಗಳು ಸುಮಾರು 20 ಕ್ಕೂಅಧಿಕ ಗಾಜಿನ ಬಾಟಲಿಗಳನ್ನು ಚೂರುಚೂರಾಗು ವಂತೆ ಒಡೆದು ಹಾಕಿ ಗರಡಿಯೊಳಗೆ ಯಾರಿಗೂ ನಡೆದಾಡದಂತೆ ದುಷ್ಕೃತ್ಯ ನಡೆಸಿದ್ದಾರೆ
ಇಂತಹ ದುಷ್ಕೃತ್ಯ ಮೆರೆದ ಕಿಡಿಗೇಡಿಗಳು ಯಾರೆಂಬುವುದನ್ನು ಅಲ್ಲಿನ ಕಾರಣಿಕ ದೈವಗಳಾದ ಕೊಡಮಣಿತ್ತಾಯ ಬ್ರಹ್ಮಬೈದೆರ್ಲು ಶೀಘ್ರವಾಗಿ ಸಾರ್ವಜನಿಕವಾಗಿ ತೋರಿಸಿ ಕೊಡಬೇಕು ಎಂದು ಸಮಸ್ತ ಹಿಂದು ಸಮಾಜದ ಪರವಾಗಿ ಸಮಿತಿ ಮೇ 16ರಂದು ದೇವಸ್ಥಾನದಲ್ಲಿ ಪ್ರಾರ್ಥನೆ ನಡೆಸಲಿದ್ದಾರೆ.
ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆ ಯಲ್ಲಿ ಶನಿವಾರ ದೂರು ನೀಡಲಾಗುವುದು ಎಂದು ಸಮಿತಿ ತಿಳಿಸಿದೆ.
ಘಟನೆಯನ್ನು ಹಿಂದೂ ಜಾಗರಣ ವೇದಿಕೆ ಮತ್ತಿತರ ಹಿಂದೂ ಸಂಘಟನೆಗಳು ಖಂಡಿಸಿದೆ.