ಕೋಲಾರ: ವಿದ್ಯಾವಂತ ಪೋಷಕರು ಮೂಢನಂಬಿಕೆಗೆ ಬಲಿಯಾಗಿ ತಮ್ಮ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿದ ಘಟನೆ ಚಿತ್ತೂರು ಜಿಲ್ಲೆಯ ಮದನಪಲ್ಲಿಯಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದ ಅಲೈಕ್ಯ(27) ಮತ್ತು ಬಿಬಿಎ ಕಲಿಯುತ್ತಿದ್ದ ಸಾಯಿದಿವ್ಯ (22) ಹೆತ್ತವರಿಂದಲೇ ಹತ್ಯೆಯಾದವರು. ತಂದೆ ಪುರುಷೋತ್ತಮ್ ನಾಯ್ಡು ಸರ್ಕಾರಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಮತ್ತು ತಾಯಿ ಪದ್ಮಜಾ ಅವರು ಖಾಸಗಿ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದರು.
ಕಳೆದ ವರ್ಷವಷ್ಟೇ ಹೊಸ ಮನೆ ಗೃಹ ಪ್ರವೇಶ ಮಾಡಿದ್ದರು. ವಿದ್ಯೆ ಇದ್ದರೂ ಮನೆಯಲ್ಲಿ ನಿತ್ಯ ಮಾಟ-ಮಂತ್ರದಂತಹ ಪೂಜೆಗಳು ನಡೆಯುತ್ತಿದ್ದವಂತೆ. ಇದೀಗ ಎಂದಿನಂತೆ ಪೂಜೆ ಮಾಡುತ್ತಿದ್ದ ಪೋಷಕರು, ಶಿವ ತಮ್ಮ ಮಕ್ಕಳು ಕರೆಯುತ್ತಿದ್ದಾನೆ. ಮಕ್ಕಳು ಮತ್ತೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಅವರನ್ನು ಕಳೆದ ರಾತ್ರಿ ಹತ್ಯೆ ಮಾಡಿದ್ದಾರೆ.
ಪೋಷಕರಿಬ್ಬರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ ಮದನಪಲ್ಲಿ ಡಿವೈಎಸ್ಪಿ ರವಿ ಮನೋಹರಾಚಾರಿ, ಚಿತ್ತೂರು ಎಸ್ಪಿ ಸುನಿಲ್ ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪುರುಷೋತ್ತಮ್ ಹಾಗೂ ಪದ್ಮಜಾ ಅವರನ್ನು ಬಂಧಿಸಿಲ್ಲ. ಮಾನಸಿಕ ತಜ್ಞರ ಕೌನ್ಸಿಲಿಂಗ್ ನಂತರ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.