


ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷರ ಮೇಲೆ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಂದ ಅವ್ಯವಹಾರ ಆರೋಪದ ಬಗ್ಗೆ ಕೆಲ ತಿಂಗಳುಗಳ ಹಿಂದೆ ಭಾರೀ ಚರ್ಚೆಗೆ ಒಳಗಾದ ಘಟನೆ ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ವರದಿಯಾಗಿತ್ತು. ಈ ಬಗ್ಗೆ ಸಾಕ್ಷ್ಯಾಧಾರಗಳೊಂದಿಗೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ.
ಪೆರುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಗ್ರಾಮಸಭೆಯು ಸೆ. 12 ರಂದು ನಡೆದಿದ್ದು, ಸಭೆಯಲ್ಲಿ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫೀಸಾರವರ ವಿರುದ್ಧ ಅವ್ಯವಹಾರದ ಆರೋಪ ಕೇಳಿ ಬಂದಿತ್ತು. ಸಭೆಯಲ್ಲಿ ಹಂಚಲಾಗಿದ್ದ ಪಂಚಾಯತ್ ಖರ್ಚು ವೆಚ್ಚದ ಪತ್ರದಲ್ಲಿ ಕೆಲವೊಂದು ಕ್ರಮ ಸಂಖ್ಯೆಗಳು ಮಾಯವಾಗಿದ್ದು, ಇದೇ ವಿಚಾರ ಗ್ರಾಮಸ್ಥರ ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು.
ಈ ವಿಚಾರವಾಗಿ ತನಿಖೆ ಆಗಬೇಕು ಹಾಗೂ ನೀವು ನಮಗೆ ಕೊಟ್ಟಿರುವ ವರದಿ ಅಧಿಕೃತವಾಗಿದ್ದರೆ ನೀವು ಸಹಿ ಹಾಕಿ ನೀಡಿ ಎಂದು ಕೇಳಿಕೊಂಡಾಗ ಸಹಿ ಹಾಕಲು ಹಿಂದೇಟು ಹಾಕಿದರು. ಈ ಸಮಯದಲ್ಲಿ ನೋಡಲ್ ಅಧಿಕಾರಿಯಾಗಿ ಬಂದಿರುವ ತಾಲೂಕು ಆರೋಗ್ಯ ಅಧಿಕಾರಿಯಾದ ಅಶೋಕ್ ಕುಮಾರ್ ರೈ ಯವರು ಅವ್ಯವಹಾರ ನಡೆಯದೇ ಇದ್ದರೆ ನಿಮಗೆ ಸಹಿ ಹಾಕಲು ಯಾಕೆ ಹೆದರಿಕೆ ನೀವು ಸಹಿ ಹಾಕಿ ಎಂದು ವಿನಂತಿಸಿದ್ದಾಗ ಅಧ್ಯಕ್ಷರು ಸಹಿ ಹಾಕಲು ಒಪ್ಪದೇ ಇರುವುದನ್ನು ನಿರ್ಣಯ ಪುಸ್ತಕದಲ್ಲಿ ಬರೆಯುವುದಕ್ಕೆ ಹೇಳಿದರು. ಯಾವುದೇ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಿಲ್ಲದ ಅಧ್ಯಕ್ಷರ ಪರವಾಗಿ ಬಂದಿರುವ ಕೆಲವೊಂದಷ್ಟು ಜನರು ಗದ್ದಲ ಎಬ್ಬಿಸಿ ಚರ್ಚೆಯ ವಿಷಯಾಂತರ ಮಾಡಲು ಪ್ರಯತ್ನಿಸಲಾಗಿತ್ತು.
ಇದೀಗ ಈ ಬಗ್ಗೆ ಪೆರುವಾಯಿ ಗ್ರಾಮದ ಗ್ರಾಮಸ್ಥ ಯತೀಶ್ ಪೆರುವಾಯಿ ಲೋಕಾಯುಕ್ತರ ಮೊರೆ ಹೋಗಿದ್ದು, ಪಂಚಾಯತ್ ಖರ್ಚು ವೆಚ್ಚದ ದಾಖಲೆ ಪತ್ರಗಳ ಸಾಕ್ಷಿಗಳನ್ನು ಮುಂದಿಟ್ಟು, ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ’ಪೆರುವಾಯಿ ಗ್ರಾಮ ಪಂಚಾಯತ್ಗೆ ಒಳಪಟ್ಟ ಗ್ರಾಮ ಸಭೆಯಲ್ಲಿ ಗ್ರಾಮಸ್ಥರಿಗೆ ತಪ್ಪು ಮಾಹಿತಿಯಿಂದ ಕೂಡಿದ ಲೆಕ್ಕಚಾರ ನೀಡುತ್ತಿದ್ದು, ಮೂಲ ಪ್ರತಿಗಳಲ್ಲಿ ಲೆಕ್ಕಚಾರಗಳು ಬೇರೆಯೇ ಇದೆ. ಅಲ್ಲದೆ, 02/08/2023 ರಿಂದ 19/02/2024 ರ ತನಕ ಅವಧಿಗೆ ಸಂಬಂಧಪಟ್ಟ ವದರಿಗಳ ಪರಿಶೀಲನೆಯಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಅದಲ್ಲದೆ, ಗ್ರಾಮ ಪಂಚಾಯತ್ ನೀಡಿದ ಖರ್ಚುಗಳ ವಿವರಗಳಲ್ಲಿ ಕೆಲವೊಂದು ಕಾಮಗಾರಿಗಳನ್ನು ಮಾಡದೆಯೇ ಹಣ ಪಡೆದ ಕಾಮಗಾರಿಗಳ ಪಟ್ಟಿಯಿಂದ ಡಿಲೀಟ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಒಟ್ಟಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನೆಫೀಸಾರವರು ಸರಕಾರದ ಹಣವನ್ನು ದುರಪಯೋಗ ಪಡಿಸುತ್ತಿರುವುದು ಮತ್ತು ಕರ್ತವ್ಯ ಲೋಪ ಎಸಗುತ್ತಿರುವ ಬಗ್ಗೆ ಎಲ್ಲಾ ಮೂಲ ದಾಖಲೆಗಳನ್ನು ಹಾಗೂ ಗ್ರಾಮ ಪಂಚಾಯತ್ನ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ, ಮತ್ತಷ್ಟು ಹಗರಣಗಳನ್ನು ಬೆಳಕಿಗೆ ತಂದು, ಈ ಬಗ್ಗೆ ಸೂಕ್ತ ಕ್ರಮ ಕಾನೂನು ಕೈಗೊಳ್ಳುವಂತೆ ದೂರಿನಲ್ಲಿ ಲೋಕಾಯುಕ್ತರವರಿಗೆ ಮನವಿ ಮಾಡಿದ್ದಾರೆ.