ಮಂಗಳೂರು : ಕಾಟಿಪಳ್ಳದ ಯುವಕನ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿ ೯ ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಟಿಪಳ್ಳ ನಿವಾಸಿಗಳಾದ ಪ್ರಶಾಂತ್ ಭಂಡಾರಿ (೨೯), ಶಾಕೀಬ್ (೨೯) ಕೃಷ್ಣಾಪುರ ನಿವಾಸಿ ಶೈಲೇಶ್ ಪೂಜಾರಿ (೧೯), ಹನೀಫ್ (೨೦), ಸುವಿನ್ ಕಾಂಚನ್ (೨೩), ಲಕ್ಷ್ಮೀಶ್ (೨೬), ಅಹ್ಮದ್ ಸಾದಿಕ್ (೨೩), ನಿಸಾರ್ ಹುಸೈನ್(೨೯), ರಂಜನ್ ಶೆಟ್ಟಿ (೨೪) ಬಂಧಿತ ಆರೋಪಿಗಳು.
ಇದೇ ಫೆಬ್ರವರಿ ೧೦ರಂದು ಸಂಜೆ ವೇಳೆ ಕಾಟಿಪಳ್ಳದ ೨ನೇ ಬ್ಲಾಕ್ನಲ್ಲಿರುವ ಟಿಕ್ಟಾಕ್ ಗಾರ್ಡನ್ ಬಳಿ ಪಿಂಕಿ ನವಾಜ್ ಎಂಬವರಿಗೆ ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಅಟ್ಟಾಡಿಸಿ ಕೊಲೆಗೆ ಯತ್ನಿಸಿದ್ದರು. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಕೊಲೆಯತ್ನ ನಡೆಸಿದ ಆರೋಪದಲ್ಲಿ ನಾಲ್ವರು ಹಾಗೂ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ಐವರನ್ನು ಬಂಧಿಸಿದ್ದು, ಒಟ್ಟಾರೆ ೯ ಆರೋಪಿಗಳ ವಿಚಾರಣೆ ನಡೆದಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಮಾರಕಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಹಳೆ ದ್ವೇಷದಿಂದ ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದುಬಂದಿದೆ.