ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಹಾಗೂ ಕಾಟಿಪಳ್ಳದ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿದ್ದ ಪಿಂಕಿ ನವಾಝ್ ನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧಗಳಿಂದ ದಾಳಿ ಮಾಡಿದೆ.
ಕಾಟಿಪಳ್ಳ ಸೆಕೆಂಡ್ ಕ್ರಾಸ್ ನಲ್ಲಿ ಘಟನೆ ನಡೆದಿದ್ದು ತಂಡವು ಅಟ್ಟಾಡಿಸಿ ತಲವಾರು ದಾಳಿ ನಡೆಸಿದೆ.ಕಾಟಿಪಳ್ಳ ನಿವಾಸಿಯಾಗಿರುವ ಪಿಂಕಿ ನವಾಜ್ ರೌಡಿ ಶೀಟರ್ ಆಗಿದ್ದೂ ಆತನ ಮೇಲೆ ಹಲವು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ, ಆತ ಇಂದು ಸಂಜೆ ರಸ್ತೆ ಬದಿ ನಿಂತಿದ್ದಾಗಲೇ ವಿರೋಧಿ ಗ್ಯಾಂಗ್ ತಲವಾರು ಬೀಸಿದೆ ಎನ್ನಲಾಗಿದೆ. ಆದರೆ, ನವಾಜ್ ಓಡಿ ತಪ್ಪಿಸಿಕೊಂಡಿದ್ದು ಬೆನ್ನು ಮತ್ತು ಕೈಗೆ ತೀವ್ರ ಗಾಯಗಳಾಗಿವೆ.
ಬಳಿಕ ಆತನನ್ನು ನಗರದ ಎಜೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಆತನ ಅರೋಗ್ಯ ಸ್ಥಿರವಾಗಿದ್ದು ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ದೀಪಕ್ ಕೊಲೆಯ ಪ್ರತೀಕಾರಕ್ಕಾಗಿ ಕೊಲೆ ಕೃತ್ಯ ನಡೆದಿದೆ ಎಂಬ ದಟ್ಟ ವದಂತಿ ಈ ಘಟನೆಯ ಬಳಿಕ ಕೇಳಿ ಬಂದಿತ್ತು.
ಆದರೆ ಇದೀಗ ಪಿಂಕಿ ನವಾಜ್ ಪೊಲೀಸರಿಗೆ ತನ್ನ ಮೇಲೆ ದಾಳಿ ಮಾಡಿದವರ ಬಗ್ಗೆ ಮಾಹಿತಿ ನೀಡಿದ್ದಾನೆ.ಸ್ಥಳೀಯ ರೌಡಿ ಗ್ಯಾಂಗ್ ಶಾಕಿಬ್ ಆಲಿಯಾಸ್ ಶಾಬು ಎಂಬಾತನ ಗ್ಯಾಂಗ್ ನಿಂದ ಪಿಂಕಿ ನವಾಜ್ ಮೇಲೆ ಕೊಲೆ ಯತ್ನ ನಡೆದಿದೆ. ಇತ್ತೀಚೆಗೆ ಈ ಗ್ಯಾಂಗ್ ಜೊತೆ ಪಿಂಕಿ ನವಾಜ್ ಮನಸ್ತಾಪ ಹೊಂದಿದ್ದ.
ಐದು ಜನರ ತಂಡ ತನ್ನ ಮೇಲೆ ದಾಳಿ ನಡೆಸಿದೆ ಎಂದು ಆತ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಹಾಗೂ ಕೊಲೆಗೆ ಯತ್ನಿಸಿದ ಆರೋಪಿಗಳ ವಿವರವನ್ನು ಈತ ಪೊಲೀಸರಿಗೆ ನೀಡಿದ್ದಾನೆ.