

ಸ್ನಾನಕ್ಕೆ ಜೋಡಿಯಾಗಿ ಹೋಗಿದ್ದಾಗ ಗೀಸರ್ ಲೀಕ್ ಆಗಿ ಪ್ರಜ್ಞೆ ತಪ್ಪಿ ಬಾತ್ರೂಮ್ನಲ್ಲಿ ಸಾವನ್ನಪ್ಪಿದ್ದ ಘಟನೆ ಚಿಕ್ಕಜಾಲದ ತರಬನಹಳ್ಳಿ ಬಳಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್, ಗೋಕಾಕ್ ತಾಲೂಕಿನ ಸುಧಾರಾಣಿ ಮೃತ ದುರ್ದೈವಿಗಳು.
ರಾತ್ರಿ 9 ಗಂಟೆ ಸುಮಾರಿಗೆ ಸ್ನಾನಕ್ಕೆಂದು ಗ್ಯಾಸ್ ಗೀಸರ್ ಆನ್ ಮಾಡಿದ್ದಾರೆ. ಈ ವೇಳೆ ಗ್ಯಾಸ್ ಗೀಸರ್ನಿಂದ ವಿಷ ಅನಿಲ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿದೆ. ಆದರೆ ಇದರ ಅರಿವು ಇರದ ಇವರು ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮ್ಗೆ ಹೋಗಿದ್ದಾರೆ. ಗೀಸರ್ ಸೋರಿಕೆಯಾದ ಕಾರಣ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.
ಮನೆಯಿಂದ ಹೊರಗೆ ಬಾರದೆ ಇದ್ದಾಗ ಬೆಳಗ್ಗೆ ಮನೆ ಮಾಲೀಕರು ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಬಾಗಿಲು ಮುರಿದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದಾರೆ. ಚಂದ್ರಶೇಖರ್ ತರಬನಹಳ್ಳಿಯಲ್ಲಿ ಮನೆ ಮಾಡಿಕೊಂಡಿದ್ದರು. ಸುಧಾರಾಣಿ ಶನಿವಾರ ಸಂಜೆ ಚಂದ್ರಶೇಖರ್ ಮನೆಗೆ ಬಂದಿದ್ದರು.
ಇಬ್ಬರೂ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್ನಲ್ಲಿ ಒಟ್ಟಿಗೆ ಕೆಲಸ ಮಾಡಿಕೊಂಡಿದ್ದು ಮದುವೆಯಾಗಲು ತಯಾರಿ ನಡೆಸಿದ್ದರು. ಆದರೆ ಮದುವೆಗೆ ಮುಂಚೆಯೇ ಮಸಣ ಸೇರಿದ್ದಾರೆ. ಸದ್ಯ ಮೃತದೇಹಗಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದು, ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.