ಮೂಡಿಗೆರೆ,ಜಾವಳಿ ಸಮೀಪದ ಜೆ.ಹೊಸಹಳ್ಳಿಯಲ್ಲಿ ಫೆ.15ರ ಗುರುವಾರ ರಾತ್ರಿ ಸಮಯದಲ್ಲಿ ದರೋಡೆಕೋರರು ಒಂಟಿಮನೆಯ ಅನಂತರಾಮ್ ಹೆಬ್ಬಾರ್ ಎಂಬುವವರ ಮನೆಗೆ ನುಗ್ಗಿದ ನಾಲ್ವರು ಅಪರಿಚಿತ ಯುವಕರ ತಂಡ ಮನೆಯ ಮೇಲೆ ದಾಳಿ ನಡೆಸಿ ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು ರೂ 5ಲಕ್ಷ ನಗದು ಸೇರಿದಂತೆ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದರು. ಈ ವೇಳೆ ಮನೆಯ ಕೆಲಸದವರಾದ ಶ್ರೀನಿವಾಸ ಮೂರ್ತಿ ದರೋಡೆಗೆ ಅಡ್ಡಿ ಪಡಿಸಿದಾಗ ಅವರ ಕೈಗೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ನಡೆಸಿ ಒಂದು ರೂಮಲ್ಲಿ ಕೂಡಿ ಹಾಕಿದ್ದರು.
ಮನೆ ಮಾಲೀಕರ ಮಗ ವಿಘ್ನ ರಾಜ್ ಹೆಬ್ಬಾರ್ ಅವರ ಬೆನ್ನಿಗೆ ಚಾಕು ಇರಿತದಿಂದ ಗಾಯವಾಗಿತ್ತು. ಗಂಭೀರ ಗಾಯಗೊಂಡ ಶ್ರೀನಿವಾಸ್ ಮೂರ್ತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಬೊಬ್ಬೆ ಹಾಕಿದಾಗ ಮೂವರು ಕಾರು ಹತ್ತಿ ಪರಾರಿಯಾಗಿದ್ದರು. ಓರ್ವ ದರೋಡೆಕೋರ ದಾರಿ ತಪ್ಪಿ ಸಮೀಪದ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತುಕೊಂಡಿದ್ದ. ಆತನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.
ಈ ಬಗ್ಗೆ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಿಂದ ಮಲೆನಾಡಿನ ಜನರನ್ನು ಬೆಚ್ಚಿಬೀಳಿಸಿದ್ದು ಇದರ ತೀವ್ರತೆಯನ್ನು ಅರಿತ ಪೊಲೀಸರು ಐವರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ|| ವಿಕ್ರಂ ಆಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಯೋಗೇಂದ್ರನಾಥ್,ಕೃಷ್ಣಮೂರ್ತಿ, ಶೈಲೇಂದ್ರ ಹೆಚ್.ಎಂ. ಪೊಲೀಸ್ ಉಪಾಧೀಕ್ಷಕ ಯೋಗೇಂದ್ರನಾಥ್ ರವರ ಮಾರ್ಗದರ್ಶನದಲ್ಲಿ. ಮೂಡಿಗೆರೆ ಪೊಲೀಸ್ ವೃತ್ತ ನಿರೀಕ್ಷಕರು ಸೋಮೇಗೌಡ ಪಿ.ಪಿ. ನೇತೃತ್ವದಲ್ಲಿ, ಬಾಳೂರು ಪಿ.ಎಸ್.ಐ ದಿಲೀಪ್ ಕುಮಾರ್, ಮೂಡಿಗೆರೆ ಪಿಎಸೈ ಶ್ರೀನಾಥ್ ರೆಡ್ಡಿ, ಗೋಣಿಬೀಡು ಪಿಎಸ್ಕೆ ಹರ್ಷವರ್ಧನ್ ಸಿಬ್ಬಂಧಿಗಳಾದ ಸಿ.ಟಿ.ರಮೇಶ್, ಗಿರೀಶ್ ಬಿ.ಸಿ. ಬಾಳೂರು ಠಾಣಾ ಸಿಬ್ಬಂದಿಗಳಾದ ವಿಶ್ವನಾಥ್ ಎ.ಎಸ್.ಐ,
ನಂದೀಶ್, ರಾಜೇಂದ್ರ, ವಸಂತ್, ಓಂಕಾರನಾಯ್ಕ, ಸತೀಶ್, ಮಹೇಶ್, ಅನಿಲ್. ಮನು ಇವರನ್ನೊಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಿ ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಬಂಟ್ವಾಳದ ಅನ್ಸರ್ @ ಅಂಚು,ಬೆಳ್ತಂಗಡಿಯ ಖಲಂದರ್ ಮೊಹಮ್ಮದ್ ಗೌಸ್, ಮೂಡಿಗೆರೆ ಬೆಟ್ಟದಮನೆ ಶೈನಿಂಗ್ ಕುಮಾರ್ @ ಶೈನಿ, ಮೂಡಿಗೆರೆ ಅಣಜೂರಿನ ಆಶ್ರಫ್ @ ಹಸರಬ್, ಮೂಡಿಗೆರೆ ಜನ್ನಾಪುರದ ಉಮೇಶ್ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದರೋಡೆ ಮಾಡಿದ್ದ ಹಣವನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದ 5 ಜನ ಆರೋಪಿಗಳ ಪತ್ತೆಗೆ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ