




ಬೆಂಗಳೂರು: ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಿಐಡಿ ಠಾಣೆಯಲ್ಲಿ ಮತ್ತೊಂದು ದೂರು ದಾಖಲಾಗಿದೆ. 2021ರಲ್ಲಿ ಘಟನೆ ನಡೆದಿದ್ದು, ಇದೀಗ ಎಸ್ಐಟಿ (SIT) ರಚನೆಯಾದ ಹಿನ್ನೆಲೆ ಮಹಿಳೆ ಮೇ 1ರಂದು ದೂರು ದಾಖಲಿಸಿದ್ದಾರೆ. ಸಂತ್ರಸ್ತೆ ಮಹಿಳೆ ಒರ್ವ ಜೆಡಿಎಸ್ ಕಾರ್ಯಕರ್ತೆ ಎಂದು ತಿಳಿದು ಬಂದಿದೆ. ಗನ್ ಪಾಯಿಂಟ್ ಇಟ್ಟು ತಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇತ್ತ ಕೆಆರ್ ನಗರ ಪೊಲೀಸ್ ಠಾಣೆಯಲ್ಲಿ ನನ್ನ ತಾಯಿ ಕಾಣೆಯಾಗಿದ್ದಾರೆಂದು ಯುವಕನೋರ್ವ ಮಾಜಿ ಸಚಿವ ಹೆಚ್ಡಿ ರೇವಣ್ಣ ಮತ್ತು ಸತೀಶ್ ಎಂಬವರು ವಿರುದ್ಧ ದೂರು ದಾಖಲಿಸಿದ್ದಾನೆ.
ಸಂತ್ರಸ್ತೆ 2021ರಲ್ಲಿ ಜನಪ್ರತಿನಿಧಿಯಾಗಿದ್ದು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಸಕರು ಮತ್ತು ಸಂಸದರನ್ನು ಆಗಾಗ್ಗೆ ಭೇಟಿಯಾಗುತ್ತಿದ್ದರು. ಒಮ್ಮೆ ಬಿಸಿಎಂ ಇಲಾಖೆಯ ಹಾಸ್ಟೆಲ್ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣರನ್ನು ಭೇಟಿಯಾಗಲು ಸಂತ್ರಸ್ತೆ ತೆರಳಿದ್ದರು. ಆದ್ರೆ ಅಂದು ಸಂಸದ ಪ್ರಜ್ವಲ್ ರೇವಣ್ಣ ನಾಳೆ ಬನ್ನಿ ಎಂದು ಕಳುಹಿಸಿದರು.
ಮರುದಿನ ಹೋದಾಗ ಎಂಪಿ ಸರ್ಕಾರಿ ನಿವಾಸದ ಕೆಳಗಿನ ಹಾಲ್ನಲ್ಲಿ ತುಂಬಾ ಜನರಿದ್ದರು. ಮೇಲಿನ ಮಹಡಿಯಲ್ಲಿ ವೇಟ್ ಮಾಡಿ ಎಂದು ಅಲ್ಲಿಯ ಸಿಬ್ಬಂದಿ ನನ್ನನ್ನು ಮೇಲ್ಗಡೆ ಕಳುಹಿಸಿದರು. ಈ ವೇಳೆ ಅಲ್ಲಿದ್ದ ಮಹಿಳೆಯರ ಜೊತೆ ಮಾತನಾಡಿ ಅಲ್ಲಿಂದ ಕಳುಹಿಸಲಾಯ್ತು. ಕೊನೆಗೆ ನಾನೊಬ್ಬಳೇ ಅಲ್ಲಿ ಉಳಿದುಕೊಂಡೆ. ಆಗ ನನ್ನನ್ನು ಕೋಣೆಯೊಳಗೆ ಕರೆಯಲಾಯ್ತು.
ನಾನು ಒಳಗೆ ಹೋಗುತ್ತಿದ್ದಂತೆ ನನ್ನ ಕೈ ಹಿಡಿದು ಒಳಗೆ ಎಳೆದುಕೊಂಡು ರೂಂನ ಬಾಗಿಲು ಹಾಕಿಕೊಂಡರು. ನಾನು ಬೇಡ ಯಾಕೆ ಬಾಗಿಲು ಹಾಕ್ತಿದ್ದೀರಿ ಅಂದ್ರೆ ಏನು ಆಗಲ್ಲ ಎಂದೇಳಿ ನನ್ನನ್ನು ಬೆಡ್ ಮೇಲೆ ಕುಳಿತುಕೊಳ್ಳುವಂತೆ ಹೇಳಿದರು.
ನಿನ್ನ ಗಂಡ ತುಂಬಾ ಜೋರು, ಸ್ವಲ್ಪ ಕಡಿಮೆ ಮಾತನಾಡಲು ಹೇಳು. ಇಲ್ಲಾಂದ್ರೆ ಅವನನ್ನು ಬಿಡಲ್ಲ. ಅವನಿಂದಲೇ ನನ್ನ ಅಮ್ಮನ ಎಂಎಲ್ಎ ಟಿಕೆಟ್ ತಪ್ಪೋಯ್ತು. ನಿನ್ನ ಗಂಡ ರಾಜಕೀಯವಾಗಿ ಬೆಳೆಯಬೇಕು ಅಂದ್ರೆ ನಾನು ಹೇಳಿದ ಹಾಗೆ ಮಾಡಬೇಕು ಎಂದು ಬಟ್ಟೆ ಬಿಚ್ಚುವಂತೆ ಹೇಳಿದ. ನಾನು ಆಗಲ್ಲ ಅಂದಿದ್ದಕ್ಕೆ ನನ್ನ ಹತ್ತಿರ ಗನ್ ಇದೆ. ನಾನು ಹೇಳಿದ ಹಾಗೆ ಕೇಳದಿದ್ರೆ ನಿಮ್ಮ ಗಂಡನನ್ನು ಬಿಡುವುದಿಲ್ಲ. ಇಬ್ಬರನ್ನು ಮುಗಿಸಿಬಿಡುತ್ತೇನೆ ಬೆದರಿಕೆ ಹಾಕಿ ಬಲತ್ಕಾರ ಮಾಡಲು ಪ್ರಯತ್ನಪಟ್ಟನು.
ಆಗ ನಾನು ಎಷ್ಟೇ ಬಿಡಿಸಿಕೊಂಡರು ಬಿಡದೇ ಬಿಗಿಯಾಗಿ ನನ್ನ ಕೈಯನ್ನು ಹಿಡಿದುಕೊಂಡ. ಕೂಗಬೇಡ ಅಂತ ಬೆದರಿಕೆ ಹಾಕಿದರು. ಆಗ ನಾನು ಭಯಪಟ್ಟೆ ಆಗ ಅವರು ಮೊಬೈಲ್ ತೆಗೆದರು. ಆ ಭಯದಿಂದ ನಾನು ಹೆದರಿ ಹೇಳಿದ ಹಾಗೆ ಕೇಳಿದೆ ಹಾಗೂ ಅವರು ಹೇಳಿದಂತೆ ಅವರ ಜೊತೆ ನಡೆದುಕೊಂಡೆ ಎಂದು ಎಫ್ಐಆರ್ ನಲ್ಲಿ ದಾಖಲಾಗಿದೆ.