ರಾಜಧಾನಿ ಬೆಚ್ಚಿಬೀಳುವಂತೆ ಬಾಗಲಗುಂಟೆಯಲ್ಲಿ ಇತ್ತೀಚೆಗೆ ನಡೆದಿದ್ದ ತಾಯಿ ಮತ್ತು ಮಗನ ಭೀಕರ ಹತ್ಯೆಯ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಕ್ರಮ ಸಂಬಂಧಕ್ಕೆ ಇಬ್ಬರ ಜೀವ ಬಲಿಯಾಗಿದೆ. ಬಾಗಲಗುಂಟೆಯ ರವೀಂದ್ರ ನಗರದಲ್ಲಿ ವಾಸವಾಗಿರುವ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್ನನ್ನು ಕೊಲೆಮಾಡಲಾಗಿತ್ತು. ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಎಂಟು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಇಬ್ಬರ ಶವ ಕೂಡಾ ಬೆಡ್ ಮೇಲೆ ಬಿದ್ದಿತ್ತು. ನವನೀತ ಅವರು ಕಳೆದ ಎರಡು ವರ್ಷಗಳಿಂದ ಗಂಡ ಚಂದ್ರುವಿನಿಂದ ದೂರವಾಗಿ ಮಗನ ಜತೆ ಜೀವನ ಸಾಗಿಸುತ್ತಿದ್ದರು.
ಆರಂಭದಲ್ಲಿ ಪೊಲೀಸರು ನವನೀತಳ ಗಂಡ ಚಂದ್ರು ಮತ್ತು ಅವನ ಕುಟುಂಬದವರನ್ನು ವಿಚಾರಿಸಿದ್ದರು. ಆದರೆ, ಅವರು ತಾವು ಕೊಲೆ ಮಾಡುವ ಮಟ್ಟಕ್ಕೆ ಹೋಗಲಿಲ್ಲ ಎಂದಿದ್ದಾರೆ. ಈ ನಡುವೆ ನವನೀತನಿಗೆ ಶೇಖರ ಎಂಬಾತನ ಜತೆ ಸಂಪರ್ಕವಿರುವ ವಿಚಾರ ಬಯಲಾಗಿತ್ತು.
ಹೀಗಿದ್ದ ಮಹಿಳೆಯ ಬಾಳಿಗೆ ಶೇಖರ ಎಂಬ ಪ್ರಿಯಕರನ ಆಗಮನವಾಗಿದೆ. ಶೇಖರ್ ಜತೆ ಕಳೆದ ಎರಡು ವರ್ಷಗಳಿಂದ ಚೆನ್ನಾಗಿದ್ದ ನವನೀತ ಇತ್ತೀಚೆಗೆ ಇನ್ನೊಬ್ಬನ್ನ ಜತೆ ಪ್ರೀತಿ ಶುರುವಾಗಿದೆ ಎಂಬ ಸಂಶಯ ಅವನಿಗಿತ್ತು. ಅದು ಕೆಲವೊಂದು ಮಾಹಿತಿಗಳ ಆಧಾರದಲ್ಲಿ ಸಾಬೀತು ಕೂಡಾ ಆಗಿದ್ದರಿಂದ ಆತ ಸಿಟ್ಟಾಗಿದ್ದ ಎನ್ನಲಾಗಿದೆ. ಹೀಗಾಗಿ ಕಳೆದ ಕೆಲವು ಸಮಯದಿಂದ ಅವರ ನಡುವೆ ಜಗಳ ನಡೆಯುತ್ತಿತ್ತು.
ಕಳೆದ ಮಂಗಳವಾರ ಸ್ವಲ್ಪ ಮಾತನಾಡಲಿಕ್ಕಿದೆ ಎಂದು ಶೇಖರ್ ನವನೀತಳ ಮನೆಗೆ ಬಂದಿದ್ದ. ಮನೆಯಲ್ಲಿದ್ದ ಮಗ ಸುಜನ್ನನ್ನು ಜ್ಯೂಸ್ ತರಲೆಂದು ಹೊರಗೆ ಕಳುಹಿಸಿದ್ದ ಶೇಖರ ನವನೀತಳ ಜತೆ ಜಗಳವಾಡಿದ್ದಾನೆ. ಗಂಡನನ್ನು ಬಿಟ್ಟಿದ್ದಿ. ಈಗ ನಾನೊಬ್ಬ ಸಾಕಾಗಲ್ವಾ ನಿಂಗೆ, ಇನ್ನೊಬ್ಬ ಬೇಕಾ ಎಂದು ನಿಂದಿಸಿದ್ದಾನೆ. ಕೊನೆಗೆ ಆಕೆಯ ಕತ್ತನ್ನೇ ಸೀಳಿ ಹಾಕಿದ್ದಾನೆ.
ಈ ನಡುವೆ ಜ್ಯೂಸ್ ಹಿಡಿದುಕೊಂಡು ಸುಜನ್ ಒಳಗೆ ಬಂದಿದ್ದ. ನವನೀತಗಳ ಸಾವನ್ನು ಮುಚ್ಚಿಟ್ಟ ಶೇಖರ ಸುಜನ್ಗೆ ನಿನಗೊಂದು ಮ್ಯಾಜಿಕ್ ತೋರಿಸ್ತೇನೆ ಎಂದು ಮರುಳು ಮಾಡಿದ್ದ. ಸುಜನ್ನನ್ನು ಚೇರ್ ಮೇಲೆ ಕುರಿಸಿ ವೇಲ್ನಿಂದ ಕೈ ಕಟ್ಟಿ ಬಳಿಕ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಸುಜನ್ನನ್ನು ಕೊಂದ ಬಳಿಕ ಆತನ ಶವವನ್ನು ಹಾಸಿಗೆಯಲ್ಲಿ ತಾಯಿಯ ಪಕ್ಕವೇ ಮಲಗಿಸಿದ್ದಾನೆ. ಕೊನೆಗೆ ಚಾಕುವನ್ನು ನವನೀತಳ ಕೈಯಲ್ಲಿ ಇಟ್ಟಿದ್ದಾನೆ. ಆಕೆಯೇ ಮಗನನ್ನು ಕೊಂದು ತಾನೂ ಕುತ್ತಿಗೆ ಚೂರಿ ಹಾಕಿಕೊಂಡು ಪ್ರಾಣ ಬಿಟ್ಟಿದ್ದಾಳೆ ಎಂದು ಬಿಂಬಿಸಲು ಮುಂದಾಗಿದ್ದಾನೆ. ಆದರೆ, ಮನೆ ಮಾಲೀಕರು, ನವನೀತಳ ಸಂಬಂಧಿಕರು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಶೇಖರ್ ಈಗ ಸಿಕ್ಕಿಬಿದ್ದಿದ್ದಾನೆ.