ಮಂಗಳೂರು: ರಾಮಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನೆಂದು ಪ್ರಸಾದ್ ಅತ್ತಾವರ ಹೇಳಿಕೊಂಡು ಬಂದಿದ್ದು ಮಂಗಳೂರು ವಿವಿ ಯಲ್ಲಿ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ ಭಾರಿ ಮೊತ್ತದ ಹಣ ಪಡೆದು ಮೋಸಗೈದ ಪ್ರಕರಣದಲ್ಲಿ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾನೆ.
ಮಂಗಳೂರು ಅಥವಾ ರಾಯಚೂರು ವಿ ವಿ ಯಲ್ಲಿ ಕುಲಪತಿ ಸ್ಥಾನ ಕೊಡಿಸುವ ಆಮಿಷವೊಡ್ಡಿ 17.5 ಲಕ್ಷ ರೂ. ಹಣವನ್ನು ಪಡೆದಿದ್ದ ಬಗ್ಗೆ ಪ್ರಸಾದ್ ಅತ್ತಾವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ವಿವಿ ಯಲ್ಲಿ ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಾಧ್ಯಾಪಾಕರಾಗಿರುವ ವಿವೇಕ್ ಆಚಾರ್ಯ ಎಂಬುವರು ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದರು. ಕುಲಪತಿಯಾಗಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದ ವಿವೇಕ್ ಆಚಾರ್ಯ ಅದಕ್ಕಾಗಿ ಲಾಬಿ ನಡೆಸಿದ್ದರು. ಈ ವೇಳೆ ಪ್ರಸಾದ್ ಅತ್ತಾವರ ತಾನು ಸಿ ಎಂ ಜೊತೆ ನಂಟು ಹೊಂದಿರುವುದಾಗಿ ಹೇಳಿಕೊಂಡು 15 ಲಕ್ಷ ಮತ್ತು ತನಗೆ ಅದಕ್ಕಾಗಿ ಓಡಾಡಲೆಂದು ಮತ್ತೆ ಎರಡೂವರೆ ಲಕ್ಷ ಹಣ ಪಡೆದಿದ್ದ. ಹಣ ಪಡೆದು ವರ್ಷದ ಮೇಲಾದ್ರೂ ಭರವಸೆ ಈಡೇರದ ಕಾರಣ ವಿವೇಕ್ ಆಚಾರ್ಯ ಠಾಣೆಗೆ ದೂರು ನೀಡಿದ್ದರು.
ಈ ಹಿಂದೆ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅತ್ತಾವರ ಕೊನೆಯ ಬಾರಿಗೆ ಶ್ರೀರಾಮ ಸೇನೆಯಲ್ಲಿದ್ದ. ಯಾವುದೋ ವಿಚಾರದಲ್ಲಿ ಸಂಘಟನೆಯಿ0ದ ಹೊರಬಿದ್ದಿದ್ದ ಪ್ರಸಾದ್, ಬಳಿಕ ತನ್ನದೇ ಆದ ರಾಮಸೇನೆ ಎಂಬ ಹೆಸರಿನಲ್ಲಿ ಸಂಘಟನೆ ಕಟ್ಟಿಕೊಂಡಿದ್ದ. ಅದರ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನೂ ತಾನೇ ಎಂದು ಹೇಳಿಕೊಂಡಿದ್ದಲ್ಲದೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಖ್ಯ ಬೆಳೆಸಿಕೊಂಡಿದ್ದ.
ಮಂಗಳೂರಿಗೆ ಸಿಎಂ ಬರುತ್ತಿದ್ದಾಗ ಹತ್ತಿರದ ನಂಟು ಇರುವಂತೆ ಪೋಸ್ ಕೊಡುತ್ತಿದ್ದ. ಪ್ರಸಾದ್ ಅತ್ತಾವರ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಠಾಣೆಯಲ್ಲಿ ರೌಡಿ ಶೀಟ್ ಬುಕ್ ಮಾಡಲಾಗಿತ್ತು. ಬಂದರು, ಕದ್ರಿ ಮತ್ತು ಕಂಕನಾಡಿ ಠಾಣೆಗಳಲ್ಲಿ ಹಲವು ಕೇಸುಗಳನ್ನು ಎದುರಿಸುತ್ತಿದ್ದಾನೆ. ಇದೀಗ ಕುಲಪತಿ ಸ್ಥಾನದ ಆಮಿಷವೊಡ್ಡಿ ಹಣ ಪಡೆದ ಆರೋಪದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ. ಇದೇ ರೀತಿ ಹಲವರಿಂದ ಹಣ ಪಡೆದು ಮೋಸಗೈದಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಅದರ ಬಗ್ಗೆ ದೂರು ಬಂದಲ್ಲಿ ತನಿಖೆ ಮಾಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.