ವಿಟ್ಲ: ವಿಟ್ಲ ಗ್ರಾಮ ಪಂಚಾಯತ್ ವಿಟ್ಲ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೆ ಏರಿ 6 ವರ್ಷಗಳು ಕಳೆದಿದ್ದು, ಕಳೆದ ಒಂದು ವರ್ಷದಿಂದ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ, ಖಾತೆ ಕಾರ್ಯಗಳು ನಡೆಯುತ್ತಿಲ್ಲ. ತಕ್ಷಣವೇ ಪ್ರಾಧಿಕಾರ ರಚನೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಆಗ್ರಹಿಸಿದ್ದಾರೆ.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪರವಾನಿಗೆಯನ್ನು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಂಯೋಜನೆಗೊಳಿಸಿದ್ದು ಈ ಸಮಸ್ಯೆಗೆ ಕಾರಣವಾಗಿದೆ. ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾನೂನುಗಳು ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದ ಕಾನೂನನ್ನೆ ಅಳವಡಿಸಿದ್ದಾರೆ.
ಪ್ರಾಧಿಕಾರದ ಕಾನೂನನ್ನು ವಿಟ್ಲ ಪಟ್ಟಣ ಪಂಚಾಯತ್ಗೆ ಅಳವಡಿಸಿರುವುದು ಎಷ್ಟು ಸರಿ. ನಮ್ಮ ಹತ್ತಿರದ ಪುತ್ತೂರು ನಗರ ಸಭೆಯ ಕಾನೂನಿನ ರೂಪುರೇಷೆಗಳೇ ಬೇರೆಯದ್ದಾಗಿದೆ. ಈ ಬಗ್ಗೆ ಈ ಮೊದಲೇ ಮಾನ್ಯ ಶಾಸಕ ರಿಗೆ ಮನವಿ ಸಲ್ಲಿಸಿದ್ದೇನೆ. ಆದರೆ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಈ ವಿಚಾರದಲ್ಲಿ ಶಾಸಕರೇ ಮುತುವರ್ಜಿವ ಹಿಸುವ ಅನಿವಾರ್ಯ ಇದೆ ಎಂದು ಹೇಳಿದರು.
ಒಂದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು. ನಮ್ಮ ವಿಟ್ಲದಲ್ಲಿ 2 ರಾಜ್ಯ ಹೆದ್ದಾರಿಗಳು ಹಾದು ಹೋಗುತ್ತವೆ. ಅದು SFI 64 ಮತ್ತು SH 101. ಇದು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 18 ಕಿ. ಮೀ. ಹಾದು ಹೋಗುತ್ತದೆ. ಬಹಳ ಮುಖ್ಯವಾಗಿ ಈ ಹೆದ್ದಾರಿಯಲ್ಲಿ 21 ಮೀಟರ್ ಬಿಟ್ಟು ಕಟ್ಟಡ ಕಟ್ಟಲು ಮಂಗಳೂರು ಪ್ರಾಧಿಕಾರದ ಶರತ್ತಾಗಿದೆ. ಈ ಕಾನೂನಿನಿಂದ 18 ಕಿ. ಮೀ. ವ್ಯಾಪ್ತಿಯಲ್ಲಿ ಯಾವುದೇ ಪರವಾನಿಗೆ ಪಡೆಯಲು ಸಾಧ್ಯವಾಗುವುದಿಲ್ಲ.
ಆದರೆ ಪುತ್ತೂರು ನಗರ ಸಭೆಗೆ ಅನ್ವಯವಾಗುವುದಿಲ್ಲ. ಸರಕಾರದ ಕಾನೂನಿನಂತ 6 ಮೀಟರ್ ಬಿಟ್ಟು ಪರವಾನಿಗೆ ನೀಡಲು ಅವಕಾಶ ಇದೆ. ಈಗಾಗಲೇ ಸರಕಾರ 18 ಕಿ. ಮೀ. ವ್ಯಾಪ್ತಿಯನ್ನು ರಾಜ್ಯ ಹೆದ್ದಾರಿಯಿಂದ ಮುಕ್ತಗೊಳಿಸಲಾಗಿದೆ. ಆದರೆ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿಲ್ಲ. ಸಮಸ್ಯೆಯ ಪರಿಹಾರಕ್ಕಾಗಿ 18 ಕಿ. ಮೀ. ವ್ಯಾಪ್ತಿಯನ್ನು ಪಟ್ಟಣ ಪಂಚಾಯತ್ ಪಡಕೊಳ್ಳುವ ಅನಿವಾರ್ಯತೆ ಇದೆ ಮತ್ತು ವಿಟ್ಲಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆಯಾಗಬೇಕು ಎಂದು ಆಗ್ರಹಿಸಿದರು.
ವಿಟ್ಲ ಪ್ರಾಧಿಕಾರ ರಚನೆಯ ಕಡತ ಈಗಾಗಲೇ ವಿಕಾಸ ಸೌಧದಲ್ಲಿದೆ. ಶಾಸಕರು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ನಮ್ಮ ಆಗ್ರಹವಾಗಿದ್ದು ಅಲ್ಲದೆ ಈ ಬಗ್ಗೆ ಉಗ್ರ ಪ್ರತಿಭಟನೆಗೆ ನಾವು ಸಜ್ಜಾಗುವ ಅನಿವಾ ರ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ ಅಶ್ರಪ್, ಮನೋಹರ್ ಲ್ಯಾನ್ಸಿ ಡಿ ಸೋಜ ಉಪಸ್ಥಿತರಿದ್ದರು.