ಕಾಸರಗೋಡು: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಚಾಲಕ ಸಾವನ್ನಪ್ಪಿದ್ದು, ಇಪ್ಪತ್ತು ಜನರು ಗಾಯಗೊಂಡಿರುವ ಘಟನೆ ಕಾಸರಗೋಡು ಪೆರಿಯ ರಸ್ತೆಯಲ್ಲಿ ನಡೆದಿದೆ.
ಕಣ್ಣೂರು-ಮಂಗಳೂರು ಮಧ್ಯೆ ಸಂಚರಿಸುವ ಮೆಹಬೂಬ್ ಬಸ್ ಪಲ್ಟಿಯಾಗಿದ್ದು, ಮೃತ ಚಾಲಕನನ್ನು ಮಧೂರು ರಾಮನಗರ ಮೂಲದ ಚೇತನ್ ಕುಮಾರ್ (37) ಎಂದು ಗುರುತಿಸಲಾಗಿದೆ.
ಮಂಗಳೂರಿನಿಂದ ಕಣ್ಣೂರಿಗೆ ಹೋಗುತ್ತಿದ್ದ ಮೆಹಬೂಬ್ ಬಸ್ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಅಪಘಾತಕ್ಕೀಡಾದ್ದು, ಇಪ್ಪತ್ತು ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಕಾಞಂಗಾಡ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಅಪಘಾತ ಸಂಭವಿಸಿದ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು.ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಈ ಭಾಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಸ್ಸಿನಲ್ಲಿದ್ದ ಎಲ್ಲರನ್ನೂ ಹೊರತೆಗೆದ ಬಳಿಕ ಅಗ್ನಿಶಾಮಕ ದಳದವರು ತಂದ ಕ್ರೇನ್ ಬಳಸಿ ಬಸ್ ಅನ್ನು ರಸ್ತೆ ಬದಿಗೆ ಸ್ಥಳಾಂತರಿಸಲಾಯಿತು. ಚಾಲಕನ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.