ಮೈಸೂರು: ಸಾಂಸ್ಕೃತಿಕ ನಗರ ಮೈಸೂರನ್ನು ಬೆಚ್ಚಿ ಬೀಳಿಸಿದ್ದ ಪ್ರೊಫೆಸರ್ ಪರಶಿವಮೂರ್ತಿ ಹತ್ಯೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಹತ್ಯೆಗೆ ಸುಫಾರಿ ನೀಡಿದ್ದ ಆರೋಪದ ಹಿನ್ನೆಲೆಯಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ಅವರ ತಂದೆ ವಿಶ್ವನಾಥ್ ಭಟ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಪರಶಿವಮೂರ್ತಿ ಅವರು ನೀಡುತ್ತಿದ್ದ ಮಾನಸಿಕ ಹಿಂಸೆ ಮತ್ತು ಕಿರುಕುಳ ತಾಳಲಾರದೆ ವಿಶ್ವನಾಥ್ ಭಟ್ ಅವರು ಹಂತಕರಿಗೆ ಸುಫಾರಿ ನೀಡಿ ಈ ಹತ್ಯೆ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಪ್ಟೆಂಬರ್ 20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿಯನ್ನು ಅವರ ಮನೆಯಲ್ಲಿಯೇ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ವಿಶ್ವನಾಥ್ ಭಟ್ ಅವರು ಮೈಸೂರಿನ ಸಂಸ್ಕೃತ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದಾರೆ. ಇದಕ್ಕೆ ಸರಕಾರದ ಅನುದಾನ ಬರುತ್ತಿದೆ.ಪರಶಿವಮೂರ್ತಿ ಈ ಶಾಲೆಯ ಕಾರ್ಯದರ್ಶಿಯಾಗಿದ್ದರು, ಪ್ರತಿಬಾರಿ ಸಂಬಳದಲ್ಲಿ ಪರಶಿವಮೂರ್ತಿ ಪಾಲು ಕೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೆ ಮಾನಸಿಕ ಮತ್ತು ಇತರ ಹಿಂಸೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಹಿನ್ನೆಲೆಯಲ್ಲಿ ವಿಶ್ವನಾಥ್ ಭಟ್ ಅವರು ಏಳು ಲಕ್ಷ ರೂಪಾಯಿ ನೀಡಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ವರದಿಯಾಗಿದೆ. ಆರೋಪಿಗಳಾದ ನಿರಂಜನ್ ಮತ್ತು ನಾಗೇಶ್ ಅವರಿಗೆ ಸುಫಾರಿ ನೀಡಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ವಿಶ್ವನಾಥ್ ಅವರು ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.