ಆಸ್ತಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರ ನಡುವೆ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ ಘಟನೆ ಕಡಬ- ಅಲಂಕಾರು ಗ್ರಾಮದಲ್ಲಿ ನಡೆದಿದೆ.
ಮೇದಪ್ಪಗೌಡ ಎಂಬವರು ತನ್ನ ತಂದೆ ತಾಯಿಯ ಜಾಗವನ್ನು ಪಾಲು ಮಾಡುವ ಬಗ್ಗೆ ತಮ್ಮನಾದ ಲೋಕೇಶನೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಲೋಕೇಶ ತನ್ನ ತಮ್ಮಂದಿರಾದ ವಿಶ್ವನಾಥ ಮತ್ತು ಪೂವಪ್ಪ ಎಂಬುವರೊಂದಿಗೆ ಸೇರಿಕೊಂಡು ಮೇದಪ್ಪ ಗೌಡರವರನ್ನು ಅವ್ಯಾಚವಾಗಿ ಬೈದು, ತನ್ನ ಕೈಯಲ್ಲಿದ್ದ ಕೊಡೆಯ ಕಬ್ಬಿಣದ ರಾಡ್ನಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ಮೇದಪ್ಪ ಗೌಡರನ್ನು ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ:82/2023 ಕಲಂ:341, 323,324,ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಡಬ ಅಲಂಕಾರು ನಿವಾಸಿ ಲೋಕೇಶ್ ಎಂಬವರು ಕಡಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಅಣ್ಣಂದಿರಾದ ಪೂವಪ್ಪ, ವಿಶ್ವನಾಥ, ಅಣ್ಣನ ಮಗ ಮೇಗಶ್ಯಾಮ ಎಂಬವರು ಸೇರಿಕೊಂಡು, ತಂದೆಯ ಜಾಗದ ವಿಷಯವನ್ನು ರಾಜಿಯಲ್ಲಿ ಇತ್ಯರ್ಥ ಮಾಡುವ ಉದ್ದೇಶದಿಂದ ಮೇದಪ್ಪನನ್ನು ತೋಟಕ್ಕೆ ಕರೆಸಿದ್ದು, ಅಲ್ಲಿಗೆ ಮೇದಪ್ಪ ಹಾಗೂ ಅವನ ಹೆಂಡತಿ ರಾಜೀವಿ ಮತ್ತು ಮಗ ಪ್ರಜ್ವಲ್ ಬಂದು ಮಾತುಕತೆ ನಡೆಸುತ್ತಾ ಇರುವಾಗ, ಮೇದಪ್ಪ ರವರು ತನ್ನ ಮಗ ಪ್ರಜ್ವಲ್ ಹಾಗೂ ಹೆಂಡತಿ ರಾಜೀವಿ ರವರೊಂದಿಗೆ ಸೇರಿ ಕತ್ತಿಯಿಂದ ಹಾಗೂ ಕೈಯಿಂದ ಹಲ್ಲೆ ನಡೆಸಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿರುತ್ತಾರೆ.
ಹಲ್ಲೆಯಿಂದ ಗಾಯಗೊಂಡ ಲೋಕೇಶ್ ರವರನ್ನು ಚಿಕಿತ್ಸೆಗಾಗಿ ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 81/2023 ಕಲಂ:341,323,324,ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.