ಬೆಂಗಳೂರು: ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಕಾರ್ಯದರ್ಶಿ ಗಣಪತಿ ಭಟ್ ಅವರನ್ನು ಬಂಧಿಸಿ ಸಿಐಡಿ ವಿಚಾರಣೆ ನಡೆಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೇರೂರು ನಿವಾಸಿ ಗಣಪತಿ ಭಟ್ ಬಂಧಿತರು. ಇವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಆಪ್ತ ಕಾರ್ಯದರ್ಶಿ ಎನ್ನಲಾಗುತ್ತಿದೆ.
ಈ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಆರೋಪವನ್ನು ನಿರಾಕರಿಸಿದ್ದು, ಬಂಧಿತ ಗಣಪತಿ ಭಟ್ ಅವರು ಗೃಹ ಸಚಿವಾಲಯದ ಸಿಬ್ಬಂದಿ ಅಲ್ಲ ಎಂದು ತಿಳಿಸಿದ್ದಾರೆ.
ಎಡಿಜಿಪಿ ಅಮೃತ ಪೌಲ್ ಅವರ ಹೇಳಿಕೆ ಆಧರಿಸಿ ಗಣಪತಿ ಭಟ್ ಅವರನ್ನು ಬಂಧಿಸಲಾಗಿತ್ತು. ಪಿಎಸ್ಐ ಅಕ್ರಮ ನೇಮಕಾತಿಯಲ್ಲಿ ಗಣಪತಿ ಭಟ್ ಅವರು ಭಾಗಿಯಾಗಿರುವ ಮಾಹಿತಿ ಲಭಿಸಿದೆ. ಗಣಪತಿ ಭಟ್ ಅವರು ಗೃಹ ಸಚಿವರ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ ಗಣಪತಿ ಭಟ್ ಅವರು ಹಲವು ಪಿಎಸ್ಐಗಳ ಅಕ್ರಮ ನೇಮಕಾತಿಯಲ್ಲಿ ಭಾಗಿಯಾಗಿದ್ದಾರೆ ಎಂದು ವಿಚಾರಣೆಗೊಳಪಟ್ಟ ಆರೋಪಿಗಳು ಮಾಹಿತಿ ನೀಡಿದ್ದು, ಇನ್ನಷ್ಟು ಮಾಹಿತಿಗಳು ಲಭ್ಯವಾಗಬೇಕಾಗಿದೆ.
READ THIS TOO: ಇದು ರಾಜ್ಯದ ಇತಿಹಾಸದಲ್ಲೇ ಮೊದಲು; ಪಿಎಸ್ಐ ನೇಮಕಾತಿ ಹಗರಣದ ಎಡಿಜಿಪಿ ಅಮೃತ್ ಪೌಲ್ ಬಂಧನ
ಅಮೃತ್ ಪೌಲ್ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದರು. ಇತ್ತೀಚೆಗೆ ನಡೆದ ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಅಮೃತ್ ಪೌಲ್ ಕೂಡಾ ಸಾಥ್ ನೀಡಿದ್ದಾರೆ ಎಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ನಾಲ್ಕು ಬಾರಿ ಅವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾಗಿದ್ದಾಗ ಅವರನ್ನು ಬಂಧಿಸಲಾಗಿದೆ.