ಬೆಂಗಳೂರು: ಪಿಯು ಉಪನ್ಯಾಸಕರ ನೇಮಕಾತಿಗಾಗಿ ಕೌನ್ಸೆಲಿಂಗ್ ಮುಗಿದು ಇನ್ನೆರಡು ದಿನಕ್ಕೆ ಒಂದು ವರ್ಷವೇ ಕಳೆದುಹೋಗುತ್ತೆ. ಆದರೂ ಸಾವಿರಕ್ಕೂ ಹೆಚ್ಚು ಉಪನ್ಯಾಸಕರಿಗೆ ಇನ್ನೂ ಕಾಲೇಜ್ ಅಲಾಟ್ ಆಗಿರುವ ಅಧಿಕೃತ ಆದೇಶ ಪ್ರತಿ ಬಂದಿಲ್ಲ. ಹೀಗಾಗಿ ಕಳೆದ ರಾತ್ರಿಯಿಂದ ಪಿಯು ಉಪನ್ಯಾಸಕರು ಅಹೋರಾತ್ರಿ ಪ್ರತಿಭಟನೆ ಶುರು ಮಾಡಿದ್ದಾರೆ.
1,203 ಮಂದಿಯ ಕೌನ್ಸೆಲಿಂಗ್ ಮುಗಿದಿದ್ದು, ಕಾಲೇಜುಗಳನ್ನೂ ಅಲಾಟ್ ಮಾಡಲಾಗಿದೆ. ಆದ್ರೆ ಕೆಲಸಕ್ಕೆ ರಿಪೋರ್ಟ್ ಮಾಡ್ಕೊಬೇಕು ಅಂದ್ರೆ ಅಧಿಕೃತ ಆದೇಶ ಪ್ರತಿ ಇರಬೇಕು. ಅದು ಮಾತ್ರ ಇನ್ನೂ ಉಪನ್ಯಾಸಕರ ಕೈಗೆ ಸೇರಿಲ್ಲ. ಹೀಗಾಗಿ ಮಲ್ಲೇಶ್ವರಂನ ಪಿಯು ಬೋರ್ಡ್ ಮುಂಭಾಗ ಪ್ರತಿಭಟನೆ ನಡೆಸಿದ ಪಿಯು ಉಪನ್ಯಾಸಕರು, ಆರ್ಡರ್ ಕಾಪಿ ಕೊಡುವವರೆಗೂ ತೆರಳುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಉಪನ್ಯಾಸಕರು ಭಾಗಿಯಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸುರೇಶ್ ಕುಮಾರ್ , ಪಿಯು ಉಪನ್ಯಾಸರ ನೇಮಕಾತಿ ಮುಗಿದ್ರೂ ಆದೇಶ ಪತ್ರ ಸಿಗದ ಹಿನ್ನಲೆ ಪಿಯು ಉಪಾನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಯಾವುದೇ ಉಪನ್ಯಾಸಕರು ಆತಂಕಗೊಳ್ಳುವ ಅಗತ್ಯವಿಲ್ಲ. ಯಾವುದೇ ಉಪನ್ಯಾಸಕರ ಹುದ್ದೆಗಳಿಗೆ ತೊಂದರೆಯಾಗದಂತೆ ಅಗತ್ಯ ತಿದ್ದುಪಡಿ ಬೇಕಾದರೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದಿದ್ದಾರೆ.