ಪುತ್ತೂರು: ಒಂದೂವರೆ ತಿಂಗಳ ಹಿಂದೆ ಬಲ್ನಾಡು ಗ್ರಾಮದ ಕಾಡ್ಲ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ಕಳವಾದ ಸೊತ್ತುಗಳು ದೈವಸ್ಥಾನದಿಂದ ಸುಮಾರು 500 ಮೀಟರ್ ದೂರದಲ್ಲಿ ತರಗೆಲೆಗಳ ರಾಶಿಯಲ್ಲಿ ಪತ್ತೆಯಾಗಿದೆ.
ಸ್ಥಳೀಯ ಮನೆಯವರು ತರಗೆಲೆ ರಾಶಿ ಮಾಡುವ ಸಂದರ್ಭದಲ್ಲಿ ದೈವಸ್ಥಾನದಿಂದ ಕಳವಾದ ದೈವದ ಎರಡು ಕಡ್ಸಲೆ ಹಾಗೂ ಬೆತ್ತಗಳು ತುಂಡು ತುಂಡಾದ ರೀತಿಯಲ್ಲಿ ಪತ್ತೆಯಾಗಿದೆ. ಕೂಡಲೇ ಅವರು ದೈವಸ್ಥಾನದ ಆಡಳಿತ ಮಂಡಳಿಯವರಿಗೆ ಮಾಹಿತಿ ನೀಡಿದ್ದು ಪತ್ತೆಯಾದ ಸೊತ್ತುಗಳು ದೈವಸ್ಥಾನಕ್ಕೆ ಸಂಬಂಧಿಸಿರುವುದಾಗಿ ದೃಢಪಡಿಸಿದ್ದಾರೆ. ಪತ್ತೆಯಾದ ಕಡ್ಸಲೆಯಲ್ಲಿ ಬೆಳ್ಳಿಯ ಕವಚಗಳು ನ.9ರಂದು ಕಳವಾಗಿತ್ತು.
ಕಾರಣಿಕ ಕ್ಷೇತ್ರವಾಗಿರುವ ಬಲ್ನಾಡು ವಿಷ್ಣುಮೂರ್ತಿ ದೈವಸ್ಥಾನದಿಂದ ನ.9ರ ರಾತ್ರಿ ಕಳ್ಳರು ದೈವಸ್ಥಾನದ ಬಾಗಿಲಿನ ಬೀಗ ಮುರಿದು ವಿಷ್ಣುಮೂರ್ತಿ ದೈವದ ಬೆಳ್ಳಿ ಕವಚ ಮಾಡಿದ ಪಟ್ಟದ ಕಡ್ಸಲೆ, ಬೆಳ್ಳಿ ಕವಚದ ಹಿಡಿಕೆ ಇರುವ ಸುರಿಯಗಳು ಹಾಗೂ ಧೂಮಾವತಿ ಕಡ್ಸಲೆ ಮೊದಲಾದವುಗಳನ್ನು ಕಳವು ಮಾಡಿದ್ದರು. ನ.10ರಂದು ಸಂಜೆ ದೀಪ ಹಚ್ಚಲು ತೆರಳಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು.