




ಪುತ್ತೂರು: ಪುತ್ತೂರಿನಿಂದ ಕಾಣಿಯೂರು ಕಡೆಗೆ ಸಂಚರಿಸುತ್ತಿದ್ದ ಮಾರುತಿ ಎರ್ಟಿಗಾ ಕಾರೊಂದು ಕಾಣಿಯೂರು ಸುಬ್ರಹ್ಮಣ್ಯ ಮುಖ್ಯ ರಸ್ತೆಯ ಗಡಿಪಿಲದಲ್ಲಿರುವ ಕರೆಮನೆ ಕಟ್ಟಿ ಎಂಬಲ್ಲಿ ಸಮೀಪ ಅಪಘಾತಕ್ಕೀಡಾಗಿದೆ. ಚಾಲಕನು ಕಾರನ್ನು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ಇಳಿಸುವ ವೇಳೆ ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ.
ಪುತ್ತೂರು ಕಡೆಯಿಂದ ಕಾಣಿಯೂರು ಮಾರ್ಗವಾಗಿ ಚಲಿಸುತ್ತಿದ್ದ ಮಾರುತಿ ಎರ್ಟಿಗಾ ಕಾರು, ಗಡಿಪಿಲ ಕರೆಮನೆ ಕಟ್ಟೆ ಬಳಿ ಬಂದಾಗ ಚಾಲಕನು ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಮಾಡಿಕೊಡಲು ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಸ್ತೆ ಬದಿಯ ಮಣ್ಣು ಜಾರುವಂತಾಗಿತ್ತು. ಈ ಸಂದರ್ಭದಲ್ಲಿ ಕಾರಿನ ಚಕ್ರಗಳು ಹಿಡಿತವನ್ನು ಕಳೆದುಕೊಂಡು ಸ್ಕಿಡ್ ಆಗಿದೆ. ತಕ್ಷಣವೇ ನಿಯಂತ್ರಣ ತಪ್ಪಿದ ಕಾರು, ರಸ್ತೆಯ ಬದಿಯ ತೋಟಕ್ಕೆ ಉರುಳಿ ಬಿದ್ದಿದೆ.
ಅಪಘಾತದ ರಭಸಕ್ಕೆ ಕಾರು ಪಲ್ಟಿಯಾಗಿದ್ದರೂ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.








