



ಪುತ್ತೂರು: ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ಗೋಸಾಟ ಮಾಡುತ್ತಿರುವ ಕುರಿತು ಬಜರಂಗದಳ ಸಂಘಟನೆಯಿಂದ ಬಂದ ಮಾಹಿತಿಯಂತೆ ಪೊಲೀಸರು ಆಟೋ ರಿಕ್ಷಾವನ್ನು ತಡೆದು ಅಪಾಯಕಾರಿ ಸ್ಥಿತಿಯಲ್ಲಿದ್ದ ಗೋವನ್ನು ರಕ್ಷಣೆ ಮಾಡಿ, ರಿಕ್ಷಾ ಚಾಲಕ ಮತ್ತು ರಿಕ್ಷಾದಲ್ಲಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿದ ಘಟನೆ ಅ.16ರಂದು ಪುತ್ತೂರು ದರ್ಬೆ ಬೈಪಾಸ್ ರಸ್ತೆ ಸಮೀಪ ನಡೆದಿತ್ತು.
ಈ ಘಟನೆಗೆ ಸಂಬಂಧಿಸಿದಂತೆ ಬನ್ನೂರು ನಿವಾಸಿಗಳಾದ ಆಟೋ ರಿಕ್ಷಾ ಚಾಲಕ ಇಬ್ರಾಹಿಂ, ಜೊತೆಯಲ್ಲಿದ್ದ ರೆಹಮತ್, ಸಫಿಯಾ ಅವರು ಪರವಾನಿಗೆ ಇಲ್ಲದೆ ಗೋವನ್ನು ಅಕ್ರಮವಾಗಿ ಸಾಗಾಟ ಮತ್ತು ಅಪಾಯಕಾರಿ ಸ್ಥಿತಿಯಲ್ಲಿ ಸಾಗಾಟ ಮಾಡುತ್ತಿದ್ದವರು ಎಂದು ಆರೋಪಿಸಲಾಗಿದೆ. ಅವರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಟೋ ರಿಕ್ಷಾವನ್ನು ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಂದರ್ಭ ರಿಕ್ಷಾಕ್ಕೆ ಬೆಂಗಾವಲಾಗಿ ಬೈಕ್ ವೊಂದು ಬಂದಿತ್ತೆನ್ನಲಾಗಿತ್ತು. ಪೊಲೀಸರು ಮಹಜರು ನಡೆಸುವ ಸಂದರ್ಭ ರಿಕ್ಷಾದ ಬಳಿ ವಾರಸುದಾರರಿಲ್ಲದ ಬೈಕ್ ಪತ್ತೆಯಾಗಿತ್ತು. ಬೈಕ್ನ ವಾರಸುದಾರರು ಬಾರದ ಹಿನ್ನೆಲೆಯಲ್ಲಿ ಬೈಕ್ ನಂಬರ್ ಆಧರಿಸಿ ವಿಳಾಸ ಪಡೆದ ಪೊಲೀಸರಿಗೆ ಬೈಕ್ನ ಇನ್ಶೂರೆನ್ಸ್ ಲ್ಯಾಪ್ಸ್ ಆಗಿರುವ ಮಾಹಿತಿ ಲಭ್ಯವಾದ ಬೆನ್ನಲ್ಲಿ ಆಟೋ ರಿಕ್ಷಾದ ಜೊತೆ ಬೈಕ್ನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.