



ಪುತ್ತೂರು: ಎಲ್ಇಡಿ ಸ್ಕ್ರೀನ್, ವಿಡಿಯೋಗ್ರಾಫಿ, ಫೋಟೋಗ್ರಾಫಿ, ಮಲ್ಟಿ ಕ್ಯಾಮೆರಾ ಮಿಕ್ಸಿಂಗ್, ವಿಡಿಯೋ ಎಡಿಟಿಂಗ್ ಹಾಗೂ ಲೈವ್ ಸ್ಟ್ರೀಮಿಂಗ್ ಸೇವೆಗಳನ್ನು ನೀಡುತ್ತಿರುವ ಪ್ರಜ್ವಲ್ ಎಂ.ಎಸ್ ಅವರ ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ನೂತನ ಕಚೇರಿ ನೆಹರುನಗರದ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಬಳಿ ಇರುವ ಅಶ್ವಿನ್ ಕಾಂಪ್ಲೆಕ್ಸ್ನಲ್ಲಿ ಶುಕ್ರವಾರ(ಆ.28) ಶುಭಾರಂಭಗೊಂಡಿತು.

ಪಿಕ್ಸೆಲ್ ಕ್ರಿಯೇಟಿವ್ ವೆಬ್ಸೈಟ್ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಪಿಕ್ಸೆಲ್ ಸಂಸ್ಥೆ ಯಶಸ್ವಿಯಾಗಿ ಒಂಭತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ಇಂದಿನ ಕಾರ್ಯಕ್ರಮಕ್ಕೆ ಎಲ್ಇಡಿ ಸ್ಕ್ರೀನ್ ವಿಶೇಷ ಮೆರುಗು ನೀಡುತ್ತಿದೆ. ಇಂತಹ ಗುಣಮಟ್ಟದ ಎಲ್ಇಡಿ ಸ್ಕ್ರೀನ್ ವ್ಯವಸ್ಥೆಯನ್ನು ಪಿಕ್ಸೆಲ್ ಸಂಸ್ಥೆ ರಾಜ್ಯಾದ್ಯಂತ ಒದಗಿಸುತ್ತಿದೆ ಎಂದು ಹೇಳಿ ಸಂಸ್ಥೆಗೆ ಶುಭಹಾರೈಸಿದರು.

ಮಾಜಿ ಶಾಸಕ ಸಂಜೀವ ಮಠಂದೂರು ದೀಪ ಬೆಳಗಿಸುವ ಮೂಲಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ, ಮೂರು ತಾಲೂಕುಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಸಂಸ್ಥೆ ಪಿಕ್ಸೆಲ್ ಕ್ರಿಯೇಟಿವ್ಸ್. ಈ ಸಂಸ್ಥೆ ಒಂದು ಹೆಜ್ಜೆ ಮುಂದೆ ಹೋಗಿ ನೂತನ ಕಚೇರಿ ಮತ್ತು ವೆಬ್ಸೈಟ್ ಪ್ರಾರಂಭಿಸಿದೆ. ಜನಮನ ಕಾರ್ಯಕ್ರಮ, ಕಂಬಳ ಸೇರಿದಂತೆ ನಾನು ಮಾಡಿದ ಪ್ರತಿಯೊಂದು ಕಾರ್ಯಕ್ರಮಗಳಿಗೂ ಪಿಕ್ಸೆಲ್ನ ಸೇವೆಯನ್ನು ಪಡೆದಿದ್ದೇನೆ. ಉತ್ತಮ ಸೇವೆಯನ್ನು ನೀಡುವ ಮೂಲಕ ಉದ್ಯಮದಲ್ಲಿ ಪಿಕ್ಸೆಲ್ ತನ್ನ ಛಾಪನ್ನು ಮೂಡಿಸಿದೆ ಎಂದು ಹೇಳಿ ಹರಸಿದರು.

ಅಕ್ಷಯ ಕಾಲೇಜಿನ ಸಂಚಾಲಕ ಜಯಂತ್ ನಡುಬೈಲ್ ಮಾತನಾಡಿ, ಎಂಟು ವರ್ಷಗಳ ಹಿಂದೆ ಸಣ್ಣ ಮಟ್ಟದಲ್ಲಿ ಆರಂಭವಾದ ಸಂಸ್ಥೆ ಇಂದು ವಿವಿಧ ಜಿಲ್ಲೆಗಳಲ್ಲಿ ತನ್ನ ಛಾಪು ಮೂಡಿಸಿದೆ. ಎಲ್ಇಡಿ ಸ್ಕ್ರೀನ್, ವಿಡಿಯೋಗ್ರಫಿ, ಲೈವ್ ಸ್ಟ್ರೀಮಿಂಗ್ ಸೇರಿದಂತೆ ವಿವಿಧ ಸೇವೆಗಳನ್ನು ಸಂಸ್ಥೆ ಒದಗಿಸುತ್ತಿದೆ ಎಂದು ಹೇಳಿ ಶುಭಹಾರೈಸಿದರು.
ಅಂಬಿಕಾ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಪ್ರಜ್ವಲ್ ಅವರು ಪುತ್ತೂರಿಗೆ ಹೊಸ ಆಯಾಮ ನೀಡಿದವರಾಗಿದ್ದಾರೆ. ಪುತ್ತೂರಿಗೆ ಅಪರೂಪದ ಸಂಸ್ಥೆಯಾಗಿರುವ ಪಿಕ್ಸೆಲ್, ತನ್ನ ಸೇವೆಗಳ ಮೂಲಕ ಗಮನ ಸೆಳೆದಿದೆ. ಇಡೀ ಕರ್ನಾಟಕದಲ್ಲಿ ಆನ್ಲೈನ್ ಶಿಕ್ಷಣವನ್ನು ಆರಂಭಿಸಿದವರಲ್ಲಿ ಪ್ರಜ್ವಲ್ ಅವರ ಕೊಡುಗೆ ಹೆಮ್ಮೆಯ ವಿಚಾರ ಎಂದರು.
ಸ್ವಸ್ತಿಕ್ ವಿಷುವಲ್ನ ಮಾಲಕ ಹರೀಶ್ ಅಡ್ಯಾರ್ ಮಾತನಾಡಿ, ಈ ಉದ್ಯಮದಲ್ಲಿ ಸೇವೆಯ ಗುಣಮಟ್ಟ ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾಗಿ ಅಥವಾ ಸಾಧ್ಯವಾದಷ್ಟು ಮುಂಚಿತವಾಗಿ ಗ್ರಾಹಕರಿಗೆ ಸೇವೆ ಒದಗಿಸುವ ಕ್ಷೇತ್ರ ಇದಾಗಿದೆ ಎಂದು ಹೇಳಿ ಸಂಸ್ಥೆಯ ಅಭಿವೃದ್ಧಿಗೆ ಶುಭಹಾರೈಸಿದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಮಹಾಬಲ ರೈ ಮಾತನಾಡಿ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಪಿಕ್ಸೆಲ್ ಸಂಸ್ಥೆ ಎಂಟು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮುಂದೆಯೂ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ವಿಜಯ್ ಸಾಮ್ರಾಟ್ ಸಂಸ್ಥೆ ಮುಖ್ಯಸ್ಥ ಸಹಜ್ ರೈ ಬಳಜ್ಜ, ಪಿಕ್ಸೆಲ್ ಸಂಸ್ಥೆ ಜನಮನ್ನಣೆಗೆ ಪಾತ್ರವಾಗಿದೆ. ಪುತ್ತೂರಿಗೆ ಸೀಮಿತವಾಗದೆ ರಾಜ್ಯಾದ್ಯಂತ ತನ್ನ ಕಾರ್ಯಚಟುವಟಿಕೆಗಳನ್ನು ವಿಸ್ತರಿಸಿರುವುದು ಶ್ಲಾಘನೀಯ ಎಂದರು.
ಕಹಳೆ ವಾಹಿನಿಯ ಮುಖ್ಯಸ್ಥ ಶ್ಯಾಮ ಸುದರ್ಶನ್ ಮಾತನಾಡಿ, ಯಾವುದೇ ಉದ್ಯಮ ಆರಂಭವಾಗಬೇಕಾದರೆ ಲಕ್ಷ್ಮಿಯ ಅನುಗ್ರಹ ಅಗತ್ಯ. ಅದರಂತೆ ಶುಭ ಶುಕ್ರವಾರ ಹಾಗೂ ವರಮಹಾಲಕ್ಷ್ಮೀ ವ್ರತದ ದಿನದಂದು ಪಿಕ್ಸೆಲ್ ಸಂಸ್ಥೆಯ ನೂತನ ಕಚೇರಿ ಉದ್ಘಾಟನೆಗೊಂಡಿರುವುದು ವಿಶೇಷ. ಸಂಸ್ಥೆ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಹಿಂದೂ ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತಡ್ಕ, ನೂತನ ಕಚೇರಿ ಪ್ರಜ್ವಲ್ ಅವರ ಸಾಧನೆಗೆ ಶಿಖರಪ್ರಾಯವಾಗಿದೆ. ಅವರ ಬದ್ಧತೆ ಹಾಗೂ ಪರಿಶ್ರಮದಿಂದ ಸಂಸ್ಥೆ ನಿರಂತರವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶುಭಹಾರೈಸಿದರು.
ಛಾಯಕುಟೀರದ ಫೋಟೋಗ್ರಾಫರ್ ಮುರಳಿ ರಾಯರಮನೆ ಮಾತನಾಡಿ, ಯಾವುದೇ ಕಾರ್ಯಕ್ರಮದ ವೈಶಿಷ್ಟ್ಯವನ್ನು ಹೊರಗಿನವರಿಗೆ ಎಲ್ಇಡಿ ಸ್ಕ್ರೀನ್ ಮೂಲಕ ಪರಿಚಯಿಸುವ ಕಾರ್ಯವನ್ನು ಪಿಕ್ಸೆಲ್ ಸಂಸ್ಥೆ ಮಾಡುತ್ತಿದೆ. ಸಂಸ್ಥೆ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಆರ್ಯಾಪು ಶ್ರೀಚಕ್ರ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಗಂಗಾಧರ್ ಅಮಿನ್ ಹೊಸಮನೆ, ಕಟ್ಟಡ ಮಾಲಕ ರಾಜರಾಮ್ ಪ್ರಭು, ಬಿಜೆಪಿ ಮುಖಂಡ ರಾಜೇಶ್ ಬನ್ನೂರು, ಸಿಜ್ಲರ್ ಮಾಲಕ ಪ್ರಸನ್ನ ಕುಮಾರ್ ಪಲ್ಲತ್ತಡ್ಕ, ಹೊಸಮ್ಮ ದೈವಸ್ಥಾನದ ಪ್ರಧಾನ ಅರ್ಚಕರಾದ ಮೋನಪ್ಪ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರ್ವತ್ತೋಡಿ, ಆರ್ಬಿಸ್ ಡಿಸ್ಪ್ಲೇ ಸೊಲ್ಯೂಷನ್ಸ್ ಮಾಲಕ ರೊನಾಲ್ಡೊ ಪಿಂಟೋ, ಪುತ್ತೂರು ಗ್ರಾಮಾಂತರ ಬಿಜೆಪಿ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರ್, ವಿಟಿವಿ ವಿಟ್ಲದ ಮುಖ್ಯಸ್ಥ ರಾಮದಾಸ್ ಶೆಟ್ಟಿ, ಯುವ ಮುಖಂಡ ನಿತೇಶ್ ಕಲ್ಲೇಗ, ಯುವ ನಾಯಕ ಅಜಿತ್ ಹೊಸಮನೆ, ಮಾಸ್ಟರ್ ಪ್ಲಾನರಿ ಮಾಲಕ ಎಸ್.ಕೆ. ಆನಂದ್, ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಜಯಂತ್ ಗೌಡ ಕರ್ಕುಂಜ, ಸೈಂಟ್ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲ ವಂ. ಡಾ| ಆಂಟನಿ ಪ್ರಕಾಶ್ ಮೊಂತೆರೋ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಶುಭಹಾರೈಸಿದರು.
ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಮಾಲಕರಾದ ಪ್ರಜ್ವಲ್ ಎಂ.ಎಸ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪಿಕ್ಸೆಲ್ ಸಂಸ್ಥೆಯ ಸಾಯಿಕಿರಣ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿಗಳು ಸಹಕರಿಸಿದರು.







