ಪುತ್ತೂರು: ಉತ್ತರ ಪ್ರದೇಶದಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ, ಕೊಲೆ ಖಂಡಿಸಿ ಪುತ್ತೂರು ಮತ್ತು ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ನೇತೃತ್ವದಲ್ಲಿ ಪುತ್ತೂರು ಅಮರ್ ಜವಾನ್ ಜ್ಯೋತಿ ಸ್ಮಾರಕದ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ಮಾತನಾಡಿ ದಲಿತ ಯುವತಿಯ ಅತ್ಯಾಚಾರ ಮಾಡಿ ಕೊಲೆ ನಡೆಸಿದ ಆರೋಪಿ ನರಹಂತಕರನ್ನು ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಗಲ್ಲು ಶಿಕ್ಷೆ ವಿಧಿಸಬೇಕು.ಉತ್ತರ ಪ್ರದೇಶದ ಮುಖ್ಯಮಂತ್ರಿ ರಾಜಿನಾಮೆ ಕೊಡಬೇಕು. ಒಟ್ಟು ಬಿಜೆಪಿಗೆ ತನ್ನ ತಪ್ಪಿನ ಅರಿವು ಆಗುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಹೇಳಿದರು. ಓಟು ಆಗುವ ತನಕ ಮಾತ್ರ ದಲಿತರ ಮೇಲೆ ಬಿಜೆಪಿಯವರಿಗೆ ಅನುಕಂಪ. ಓಟು ಮುಗಿದ ಬಳಿಕ ಮೇಲ್ವವರ್ಗ, ಕೆಳವರ್ಗ ಅಸ್ಪ್ರಶ್ಯ ಹುಟ್ಟಿಕೊಂಡು ಜಾತಿ, ಜಾತಿಯ ಮೇಲೆ ವಿಭಜನೆ ಮಾಡಿ ವಿಷ ಬೀಜ ಬಿತ್ತುವ ಹುನ್ನಾರ ಮಾಡುವ ಬಿಜೆಪಿ ಸರಕಾರದ ವಿರುದ್ಧ ನಮ್ಮ ಹೋರಾಟ. ಈ ಹೋರಾಟ ಇವತ್ತು ಜಿಲ್ಲೆಯಾದ್ಯಂತ ನಡೆಸುತ್ತಿದ್ದೇವೆ ಎಂದ ಅವರು ಕಾಂಗ್ರೆಸ್ ಕೇವಲ ಅಧಿಕಾರಕ್ಕಾಗಿ ಮಾತ್ರವಲ್ಲ.
ಅನ್ಯಾಯದ ವಿರುದ್ಧ ಈ ಹಿಂದೆ ಮತ್ತು ಹೋರಾಟ ಮಾಡಿದೆ. ಮುಂದೆಯೂ ಹೋರಾಟ ಮಾಡಲಿದೆ ಎಂದು ಹೇಳಿದರು. ಯೋಗಿ ಆದಿತ್ಯನಾಥ ಅವರು ತಾನು ತೊಟ್ಟಿರುವ ಕಾವಿಗೆ ನಿಜವಾದ ಬೆಲೆ ಕೊಡುವುದಾದರೆ ಅವರು ರಾಜಕೀಯಕ್ಕೆ ನಿವೃತ್ತಿ ಕೊಟ್ಟು ಮಠಕ್ಕೆ ಸೇರಬೇಕು. ಈ ಮಿಥುನ್ ರೈ ಸಾಯುವ ತನಕ ಪ್ರತಿ ತಿಂಗಳು ಅವರ ಪಾದಸ್ಪರ್ಶ ಮಾಡುತ್ತಾನೆ. ಅವರ ಯಾವ ಮಠಕ್ಕೆ ಸೇರುತ್ತಾರೋ ಅಲ್ಲಿಗೆ ಹೋಗಿ ಪಾದಸ್ಪರ್ಶ ಮಾಡುತ್ತೇನೆ. ಆದರೆ ಯೋಗಿ ಆದಿತ್ಯನಾಥ ಅವರ ನಾಥ ಪರಂಪರೆಯ ವಿರುದ್ಧ ಆಗಲಿ ಜೋಗಿ ಜನಾಂಗದ ವಿರುದ್ಧ ಆಗಲಿ ಮಿಥನ್ ರೈ ಮಾತನಾಡಿಲ್ಲ.
ಪುತ್ತೂರಿನ ಯುವಮೋರ್ಚದ ನನ್ನ ಮಿತ್ರರು ನನ್ನ ವಿರುದ್ದ ದೂರು ನೀಡುವ ಮೂಲಕ ಒಂದು ಸಮುದಾಯವನ್ನು ಎತ್ತಿ ಕಟ್ಟುವ ಹುನ್ನಾರ ಮಾಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡಿದವರು ಒಂದು ಸಾಕ್ಷಿ ತಂದು ಕೊಟ್ಟರೆ ನಾನು ರಾಜಕೀಯ ನಿವೃತ್ತಿ ಮಾತ್ರವಲ್ಲ ಇಲ್ಲಿಯೇ ಪ್ರಾಣ ಕೊಡಲು ಸಿದ್ದನಿರುವೆ. ಈ ಕುರಿತು ದೂರು ಕೊಟ್ಟವರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಮಾಣಕ್ಕೆ ಸಿದ್ಧರಾಗಬೇಕು.
ನಾನಿವತ್ತು ಪೂರ್ತಿ ದಿನ ಪುತ್ತೂರಿನಲ್ಲಿದ್ದೇನೆ. ಮಿಥುನ್ ರೈ ಪ್ರತಿಭಟನೆಯಲ್ಲಿ ಮಾತನಾಡಿದ್ದು ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಆದಿತ್ಯನಾಥರ ವಿರುದ್ಧ. ಸಮುದಾಯದ ವಿರುದ್ಧವಲ್ಲ. ನನ್ನ ಹೋರಾಟವನ್ನು ಕುಂದಿಸುವ ಬಿಜೆಪಿಗೆ ಯಾವತ್ತೂ ಸಾಧ್ಯವಿಲ್ಲ. ಆದರೆ ನಾನು ದೇವಸ್ಥಾನಕ್ಕೆ ಹೋಗದೆ ನನ್ನ ತಾಯಿಯ ಕಾಲು ಹಿಡಿಯದೇ ಒಂದು ದಿನ ನೀರು ಕುಡಿದಿರಲಿಕ್ಕಿಲ್ಲ. ಇವತ್ತು ನನ್ನ ಹೋರಾಟ ದಲಿತ ಯುವತಿಯ ಪರವಾಗಿ.
ನಾನು ಜೋಗಿ ಜನಾಂಗ ಮತ್ತು ನಾಥ ಪರಂಪರೆಯ ವಿರುದ್ಧ ಮಾತನಾಡಿದ್ದೇ ಆಗಿದ್ದರೆ ನನ್ನ ತಲೆ ಇದೆ ನಿಮ್ಮ ಖಡ್ಗವಿದೆ. ನಾನು ಎಲ್ಲಿ ಬೇಕಾದರೂ ತಲೆ ತಗ್ಗಿಸಿ ನಿಲ್ಲುತ್ತೇನೆ. ನಿಮ್ಮ ಯಾವ ಶಿಕ್ಷೆಗೂ ನಾನು ಸಿದ್ಧ. ಬಿಜೆಪಿ ಯವರು ನನ್ನ ಸವಾಲನ್ನು ಸ್ವೀಕಾರ ಮಾಡಬೇಕು ಎಂದು ಪುತ್ತೂರಿನ ಕಾಂಗ್ರೆಸ್ ಸಭೆಯಲ್ಲಿ ಮಿಥುನ್ ರೈ ಹೇಳಿದರು್.
ಪ್ರತಿಭಟನಾ ಸಭೆಯಲ್ಲಿ ಅಂಬೇಡ್ಕರ್ ತತ್ವರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಗಿರಿಧರ ನಾಯ್ಕ್, ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು, ವಿಟ್ಲ-ಉಪ್ಪಿನಂಗಡಿ ಕಾಂಗ್ರೆಸ್ ಎಸ್ಸಿ ಘಟಕದ ಮುಖಂಡ ಸೇಸಪ್ಪ ನೆಕ್ಕಿಲು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ಕೆಪಿಸಿಸಿ ಸದಸ್ಯ ಡಾ. ರಘು, ಗಣೇಶ್ ಪೂಜಾರಿ, ಬಾಲಚಂದ್ರ ಕೃಷ್ಣಾಪುರ ಮತ್ತಿತರರು ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ ಆಳ್ವ ಪ್ರತಿಭಟನಾ ಮನವಿಯನ್ನು ಮಂಡಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಸೋಮನಾಥ ಉಪ್ಪಿನಂಗಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಮಾಜಿ ಅಧ್ಯಕ್ಷ ಮೊಯ್ದೀನ್ ಅರ್ಶದ್ ದರ್ಬೆ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಅಂಬೇಡ್ಕರ್ ಆಪತ್ಬಾಂಧವ ಟ್ರಸ್ಟ್ ಅಧ್ಯಕ್ಷ ರಾಜು ಹೊಸ್ಮಠ, ಪುಡಾದ ಮಾಜಿ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಶೇಖರ್ ಕುಕ್ಕೆಟ್ಟಿ, ಡಾ. ರಾಜಾರಾಂ, ಭಾಸ್ಕರ ಗೌಡ ಇಚ್ಲಂಪಾಡಿ, ಚಂದ್ರಹಾಸ ರೈ ಬೋಳೋಡಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಉಷಾ ಅಂಚನ್, ಪಿಪಿ ವರ್ಗೀಸ್, ರಾಮ ಪಾಂಬಾರು, ಅಮಳ ರಾಮಚಂದ್ರ ಮತ್ತಿತರರು ಉಪಸ್ಥಿತರಿದ್ದರು.