ಪುತ್ತೂರು: ಗಂಡನೋರ್ವ ಪತ್ನಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಕುರಿತು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ನ್ಯಾಯಾಲಯ ಆದೇಶ ನೀಡಿದ್ದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ನಝ್ಮಿಯಾ ದೂರುದಾರರಾಗಿದ್ದು, ಕಾವೇರಿಕಟ್ಟೆ, ಮಣಿಕಂಠ ಗ್ಯಾಸ್ ಏಜೆನ್ಸಿ ಬಳಿಯ ದಿ.ಹಸೈನಾರ್ ಅವರ ಪುತ್ರ ನನ್ನ ಗಂಡ ರಫೀಕ್ ಕೆ.ಟಿ ಅವರು ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. 2018ರ ಫೆ. 1ಕ್ಕೆ ರಫೀಕ್ ಕೆ.ಟಿ ಯೊಂದಿಗೆ ನನ್ನ ಮದುವೆ ಆಗಿದ್ದು, 3 ವರ್ಷದ ಗಂಡು ಮಗು ಕೂಡಾ ಇದೆ. ಆದರೆ ನನ್ನ ಗಂಡ ನನಗೆ ನಿರಂತರ ಹಿಂಸೆ ನೀಡುತ್ತಿದ್ದಾರೆ. ಹಲವು ಬಾರಿ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದಾರೆ ಎಂದು ನಝ್ಮಿಯಾ ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಸ್ವೀಕರಿಸಿದ ನ್ಯಾಯಾಲಯ, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ನೀಡಿದ ಆದೇಶದ ಮೇರೆಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.