ಪುತ್ತೂರು: ಎಡನೀರು ಮಠದ ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡು ವಿಜಯದಶಮಿಯ ಅ.28ರಂದು ಸನ್ಯಾಸ ದೀಕ್ಷೆ ಪಡೆಯುವ ಪೂರ್ವಭಾವಿಯಾಗಿ ಸೆ. 24 ರಂದು ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ನಾನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದೆ. ಅದೇ ಸಮಯ ನಾನು ಪ್ರತಿ ಸೋಮವಾರ ದೇವಸ್ಥಾನಕ್ಕೆ ಬರುತ್ತಿದ್ದೆ. ಅದೇ ರೀತಿ ಶ್ರೀಗಳೊಂದಿಗೂ ಹಲವು ಬಾರಿ ಬಂದಿದ್ದೇನೆ. ಪುತ್ತೂರಿನ ಸಂಬಂಧ ಅತ್ಯಂತ ಹೆಚ್ಚು.
ಈ ನಿಟ್ಟಿನಲ್ಲಿ ಇವತ್ತೂ ಕೂಡಾ ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಮಾಡಿ ಪ್ರಸಾದ ಪಡೆದು ತುಂಬಾ ಸಂತೋಷ ಆಗಿದೆ. ನಮ್ಮೆಲ್ಲಾ ಕಾರ್ಯಗಳಿಗೆ ಮಹಾಲಿಂಗೇಶ್ವರನ ದಯೆ ಇದೆ ಎಂಬ ವಿಶ್ವಾಸ ಇದೆ. ಎಡನೀರಿಗೂ ಪುತ್ತೂರಿಗೆ ಅವಿನಾಭಾವ ಸಂಬಂಧವಿದೆ. ಸ್ವಾಮಿಗಳೇ ಯಕ್ಷಗಾನ ಸಪ್ತಾಹದ ಚಿಂತನೆಯನ್ನು ಮಾಡಿದ್ದರು. ಅದರಲ್ಲಿ ಹೆಚ್ಚಿನ ಯಕ್ಷಗಾನ ಸಪ್ತಾಹ ಬಹುಶಃ ಪುತ್ತೂರಿನಲ್ಲೇ ಮಾಡಿದ್ದಾರೆ. ಪುತ್ತೂರಿನ ಜನರ ಮೇಲೆ ಅವರಿಗೆ ತುಂಬಾ ವಿಶ್ವಾಸ ಇತ್ತು. ಇಲ್ಲೇ ಕೆಮ್ಮಾಯಿ ಶ್ರೀ ಮಹಾವಿಷ್ಣು ಮಂಟಪದಲ್ಲಿ ಚಾತುರ್ಮಾಸ್ಯವನ್ನು ಪೂರೈಸಿದ್ದರು. ಹಾಗಾಗಿ ಆ ರೀತಿಯ ಸಂಬಂಧವನ್ನು ನಾವು ಕೂಡಾ ಮುಂದುರಿಸುತ್ತೇವೆ ಎಂದರು.
ಬ್ರಹ್ಮಶ್ರೀ ವೇ ಮೂತಿ ಕುಂಟಾರು ರವೀಶ ತಂತ್ರಿಯವರು ಶ್ರೀ ದೇವರ ನಡೆಯಲ್ಲಿ ಪ್ರಾರ್ಥನೆ ಮಾಡಿದರು. ಬಳಿಕ ಗೋಪುರದಲ್ಲಿ ಶ್ರೀಗಳ ಪರವಾಗಿ ಮಾತನಾಡಿದರು. ಜಯರಾಮ ಮಂಜತ್ತಾಯರವರು ಸನ್ಯಾಸ ದೀಕ್ಷೆ ಪಡೆಯುವ ಮುಂದೆ ಕ್ಷೇತ್ರದರ್ಶನ ಮಾಡಬೇಕೆಂಬ ಸಂಕಲ್ಪದಂತೆ ಇವತ್ತು ಪುತ್ತೂರು ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯ ಭೇಟಿ ನಡೆದಿದೆ. ಜಯರಾಮ ಮಂಜತ್ತಾಯರವರು ಕಾಂಚಿಯಲ್ಲೇ ಸನ್ಯಾಸ ದೀಕ್ಷೆ ಪಡೆದು ಬರಲಿದ್ದಾರೆ. ಬಳಿಕ ಪೀಠಾರೋಹಣ ಕಾರ್ಯಕ್ರಮಕ್ಕೆ ಕುಂದು ಬಾರಾದ ರೀತಿಯಲ್ಲಿ ಕಾರ್ಯಕ್ರಮ ಸಂಯೋಜನೆ ಮಾಡಿದೆ. ಪೀಠಾರೋಹಣ ಕಾರ್ಯಕ್ರಮಕ್ಕೆ ಪುತ್ತೂರಿನ ಎಲ್ಲಾ ಭಕ್ತರು ಆಗಮಿಸುವಂತೆ ಜಯರಾಮ ಮಂಜತ್ತಾಯರವರ ಪರವಾಗಿ ಆಮಂತ್ರಿಸಿದರು.
ಶ್ರೀ ದೇವರ ಗರ್ಭಗುಡಿಗೆ ತೆರಳಿದ ಅವರು ಅಲ್ಲಿ ಶ್ರೀ ದೇವರಿಗೆ ಆರತಿ ಬೆಳಗಿಸಿ, ಬಳಿಕ ದೇವಳದ ನಡೆಯಲ್ಲಿ ಪ್ರಾರ್ಥನೆ ಮಾಡಿದರು. ಇದೇ ಸಂದರ್ಭದಲ್ಲಿ ದೇವಳದ ಆಡಳಿತಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಡಾ. ಯತೀಶ್ ಉಳ್ಳಾಲ್ ಅವರು ಶ್ರೀಗಳಿಗೆ ಶಾಲು ಸಮರ್ಪಣೆಯೊಂದಿಗೆ ಗೌರವ ನೀಡಿದರು.
ಕ್ಷೇತ್ರದ ತಂತ್ರಿ ಕುಂಟಾರು ರವೀಶ ತಂತ್ರಿಯವರು ಶ್ರೀಗಳಿಗೆ ದೇವರ ಪ್ರಸಾದ ವಿತರಿಸಿದರು. ದೇವಳದ ಗೋಪುರದಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ತೆರಳಿದರು. ಶ್ರೀಗಳು ದೇವಳಕ್ಕೆ ಆಗಮಿಸುವ ವೇಳೆ ಪುತ್ತೂರಿನ ಭಕ್ತ ವೃಂದ ಅವರನ್ನು ದೇವಳದ ರಾಜಗೋಪುರದಲ್ಲಿ ಹಾರಾರ್ಪಣೆ ಮಾಡಿ ಗೌರವಿಸಿದರು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಅವರು ಶ್ರೀಗಳನ್ನು ದೇವಸ್ಥಾನಕ್ಕೆ ಬರಮಾಡಿಕೊಂಡರು.