ಪುತ್ತೂರು: ಚಿನ್ನಾಭರಣಕ್ಕಾಗಿ ಮಹಿಳೆಯರಿಬ್ಬರ ಮೇಲೆ ವ್ಯಕ್ತಿಯೋರ್ವ ಹಲ್ಲೆ ನಡೆಸಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡ ಮಹಿಳೆಯರಿಬ್ಬರು ಪುತ್ತೂರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪುತ್ತೂರು ಬಡಗನ್ನೂರು ಗ್ರಾಮ ನಿವಾಸಿಗಳಾದ ಸುರೇಖಾ ಹಾಗೂ ಕೆಲಸದಾಳು ಗಿರಿಜಾ ಹಲ್ಲೆಗೊಳಗಾದವರು. ಸುರೇಖಾ ಅವರ ಮಗ ರವಿಚಂದ್ರ ನೀಡಿದ ದೂರಿನಂತೆ ಸುರೇಶ್ ನಾಯ್ಕ ಎಂಬಾತನ ವಿರುದ್ಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಖಾ ಅವರ ಮಗ ಬೆಳಿಗ್ಗೆ ಎಂದಿನಂತೆ ಕೆಲಸಕ್ಕೆ ತೆರಳಿದ್ದು, ಮಧ್ಯಾಹ್ನ ವೇಳೆ ಕೆಲಸ ಮುಗಿಸಿ ವಾಪಾಸು ಮನೆಗೆ ಬಂದಾಗ ಸುರೇಖಾ ಅವರ ಮೊಬೈಲ್ ಮನೆಯಲ್ಲಿ ರಿಂಗ್ ಆಗುತ್ತಿತ್ತು. ಕರೆ ಸ್ವೀಕರಿಸಿ ಮಾತನಾಡಿದಾಗ ನೆರೆಮನೆಯ ವ್ಯಕ್ತಿ ನಿಮ್ಮ ತೋಟದಲ್ಲಿ ಇಬ್ಬರು ಹೆಂಗಸರು ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿದು ರವಿಚಂದ್ರ ಅವರು ತೋಟದ ಕಡೆಗೆ ಹೋಗುತ್ತಿರುವ ಸಂದರ್ಭ ಎದುರಿನಿಂದ ಮನೆಗೆ ಕೆಲವೊಮ್ಮೆ ಕೆಲಸಕ್ಕೆ ಬರುತ್ತಿದ್ದ ಸುರೇಶ್ ನಾಯ್ಕ ಎಂಬಾತನು ಬರುತ್ತಿರುವುದನ್ನು ನೋಡಿದ್ದಾರೆ.
ಅವರು ತೋಟಕ್ಕೆ ಹೋಗಿ ನೋಡಿದಾಗ ಸುರೇಖಾ ಹಾಗೂ ಕೆಲಸದಾಳು ಗಿರಿಜಾ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡು ಬಿದ್ದಿದ್ದರು. ತಕ್ಷಣ ಚಿಕಿತ್ಸೆಗಾಗಿ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುವ ವೇಳೆ ಎಚ್ಚರವಾದ ಸುರೇಖಾ ಅವರು “ಮಧ್ಯಾಹ್ನ ಸಮಯ ಆರೋಪಿ ಸುರೇಶ್ ನಾಯ್ಕ ಎಂಬಾತ ಬಂದು ಮನೆಯಲ್ಲಿದ್ದ ನಗದು ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಹಲ್ಲೆ ನಡೆಸಿ ಬೈರಾಸಿನಲ್ಲಿ ಕುತ್ತಿಗೆಯನ್ನು ಬಿಗಿದು ಕೊಲೆ ಯತ್ನಿಸಿದ್ದಾನೆ ಎಂದು ಘಟನೆಯ ಬಗ್ಗೆ ರವಿಚಂದ್ರ ಅವರಲ್ಲಿ ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ಮಹಿಳೆಯರಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ರವಿಚಂದ್ರ ಅವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.