ಪುತ್ತೂರು: ಸದ್ವರ್ತನೆಗಾಗಿ ಪಡೆದಿದ್ದ ಮುಚ್ಚಳಿಕೆಯನ್ನು ಉಲ್ಲಂಘಿಸಿರುವ ಬಿಜೆಪಿ ಕಾರ್ಯಕರ್ತ ನವೀನ್ ರೈ ಬಾಂಡ್ನ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಸಂಪ್ಯ ಪೊಲೀಸರು ಮನವಿ ಮಾಡಿದ್ದಾರೆ.
ಪುತ್ತೂರು ಒಳಮೊಗ್ರು ಗ್ರಾಮದ ಕೈಕಾರ ಪನಡ್ಕ ನಿವಾಸಿ ಬಿಜೆಪಿ ಕಾರ್ಯಕರ್ತ ನವೀನ್ ರೈ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸದ್ವರ್ತನೆಗಾಗಿ ಪಿ.ಎ.ಆರ್ನ್ನು 20-8-2022ರಂದು ದಾಖಲಾಗಿತ್ತು. ಬಳಿಕ ಇವರ ವಿರುದ್ದ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಲ್ಲಿ ದಿನಾಂಕ 2-11-2022 ರಿಂದ 2-11-2023ರ ವರೆಗೆ 1 ವರ್ಷದ ಅವಧಿಗೆ 50,000/- ಮೊತ್ತದ ಜಾಮೀನು ಸಹಿತ ಮುಚ್ಚಳಿಕೆ ಪತ್ರವನ್ನು ಪಡೆದಿರುತ್ತಾರೆ.
ಇವರು ಸದ್ವರ್ತನೆಗಾಗಿ ಹಾಕಿದ ಷರತ್ತುಬದ್ಧ ಮುಚ್ಚಳಿಕೆಯನ್ನು ಉಲ್ಲಂಘನೆ ಮಾಡಿ ಕೆಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನವೀನ್ ರೈ ರವರ ಸದ್ವರ್ತನೆಗಾಗಿ ಹಾಕಿದ ಜಾಮೀನು ಸಹಿತ ಮುಚ್ಚಳಿಕೆಯೊಂದಿಗೆ ನೀಡಿದ ಬಾಂಡ್ನ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿಯವರಿಗೆ ಮನವಿ ನೀಡಿರುತ್ತಾರೆ.