ಪುತ್ತೂರು: ಶಿವಾಜಿ ಮಹಾರಾಜರ ಶೌರ್ಯ, ಜಾಣ್ಮೆ, ಸಾಹಸ, ದೇಶ ಪ್ರೇಮ ಅವರ ಜೀವನ ಚರಿತ್ರೆಯ ಇನ್ನೂ ಅನೇಕ ವಿಚಾರಗಳು ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿಯೇ ಕೊಂಡಾಡುವಂತಾಗಿದೆ. ಇಂತಹಾ ಮಹಾನ್ ಪುರುಷನ ಪಡೆದ ನಾವು ಮತ್ತು ನಮ್ಮ ದೇಶದ ಜನತೆ ಪುಣ್ಯವಂತರು ಎಂದು ಶ್ರೀರಾಮ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ತಿರುಮಲೇಶ್ವರ ಭಟ್ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಕಲಾ ಸಂಘದ ವತಿಯಿಂದ ನಡೆದ ಶಿವಾಜಿ ಮಹಾರಾಜನ ಜನ್ಮ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಅವರು ಮಾತನಾಡಿದರು.
ಶಿವಾಜಿ ಆಡಳಿತಾವಧಿಯಲ್ಲಿ ಸಾಂಪ್ರದಾಯಿಕ ಹಿಂದೂ ಮೌಲ್ಯಗಳಿಗೆ ಹಾಗೂ ಶಿಕ್ಷಣಕ್ಕೆ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು.ಛತ್ರಪತಿ ಶಿವಾಜಿ ಮಹಾರಾಜನು ತನ್ನ ಜೀವನದುದ್ದಕ್ಕೂ ಸಾಹಸವನ್ನು ಮಾಡಿದವನು ಹಾಗೂ ಬಡ ಜನರಿಗೆ, ನಿರ್ಗತಿಕರಿಗೆ ಯಾವಾಗಲೂ ಕೂಡ ಪ್ರೀತಿ , ಗೌರವವನ್ನು ನೀಡುತ್ತಿದ್ದರು. ಶಿವಾಜಿ ಮಹಾರಾಜರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರ ಆದರ್ಶವನ್ನು, ಜೀವನ ಚರಿತ್ರೆಯನ್ನು ಈಗಿನ ಮತ್ತು ಮುಂದಿನ ತಲೆ ಮಾರಿಗೆ ತಿಳಿಸುವುದಲ್ಲದೇ ಪಾಲನೇ ಮಾಡುವಂತಾಗಬೇಕಾಗಿದೆ. ಈ ಮೂಲಕ ದೇಶಾಭಿಮಾನ ಮೂಡುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ವಿದ್ಯಾರ್ಥಿಗಳು ಚರಿತ್ರೆಯಲ್ಲಿ ಬಗ್ಗೆ ತಿಳಿದುಕೊಂಡು ಐತಿಹಾಸಿಕ ವ್ಯಕ್ತಿಗಳ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಈ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕಿ ಯಶವಂತಿ ಡಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ನಾಯಕ ಮಯೂರ್ ಬಿ. ಜೆ ಸ್ಯಾಗತಿಸಿ ವಿದ್ಯಾರ್ಥಿನಿ ಪದ್ಮಾ ರೈ ವಂದಿಸಿದರು. ವಿದ್ಯಾರ್ಥಿನಿ ಈಶ್ವರಿ ನಿರೂಪಿಸಿದರು.