ಪುತ್ತೂರು: ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸಂಪ್ಯ ಠಾಣಾ ಪೊಲೀಸರು ಸೆ.10 ರಂದು ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಶಿವಪುರದ ಹಾಟ್ ಬಜಾರ್ ನಿಂದ ಬಂಧಿಸಿದ್ದಾರೆ
ಬಂಧಿತ ಆರೋಪಿ ಉತ್ತರ ಪ್ರದೇಶದ ಗೋರಕ್ ಪುರ ಜಿಲ್ಲೆಯ ಶಿವಪುರ ಗ್ರಾಮದ ಮುಲೀನ್ ಸೊನಾಕ್ಕರ್ ಎನ್ನಲಾಗಿದೆ.
2007 ರಲ್ಲಿ ಬೆಟ್ಟಂಪಾಡಿಯ ಚೆಲ್ಯಡ್ಕ ಸಮೀಪ ಗಾಂಜಾ ಸಾಗಾಟದ ವೇಳೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಅವರಿಂದ ಮುಕ್ಕಾಲು ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದರು. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಳಿಕದ ಬೆಳವಣಿಗೆಯಲ್ಲಿ ಆರೋಪಿಗಳು ಜಾಮೀನು ಪಡೆದಿದ್ದರು. ಆರೋಪಿಗಳ ಪೈಕಿ ಮುಲೀನ್ ಸೊನಾಕ್ಕರ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ನ್ಯಾಯಾಲಯ ಮುಲೀನ್ ಸೊನಾಕ್ಕರ್ ಮೇಲೆ ವಾರಂಟ್ ಜಾರಿ ಮಾಡಿತ್ತು . ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಕಾರ್ಯಾಚರಣೆಯಲ್ಲಿ ಸಂಪ್ಯ ಠಾಣಾ ಹೆಚ್.ಸಿ ಧರ್ಮಪಾಲ ಕೆ., ಪಿ.ಸಿ ಶಿವಾನಂದ ಕೆ., ಪಿ.ಸಿ. ಮುನಿಯ ನಾಯ್ಕ ಪಾಲ್ಗೊಂಡಿದ್ದರು.ಆರೋಪಿ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು