ತಿರುವನಂತಪುರಂ:ಕೇರಳದಲ್ಲಿ ಅಸ್ತಿತ್ವಕ್ಕೆ ಬಂದಿರುವ ನೂತನಯುಡಿಎಫ್ ಸರಕಾರ ಸೋಮವಾರ(ಮೇ 18) ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದ್ದು, ಇದರಲ್ಲಿ ಜೂನ್ 15 ರಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ಹೆಚ್ಚಳ ಮತ್ತು ವೃದ್ಧರಿಗಾಗಿ ಮೀಸಲಾದ ಇಲಾಖೆಯನ್ನು ರಚಿಸುವುದು ಸೇರಿವೆ.

ಮೊದಲ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಕಟಿಸಿದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಚುನಾವಣೆಯ ಸಮಯದಲ್ಲಿ ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.ವೃದ್ಧರಿಗಾಗಿ ಪ್ರತ್ಯೇಕ ಇಲಾಖೆ ರಚಿಸುತ್ತಿರುವ ದೇಶದಲ್ಲೆ ಮೊದಲನೆಯ ರಾಜ್ಯ ಕೇರಳ ಎಂದು ಮುಖ್ಯಮಂತ್ರಿ ಹೇಳಿದರು.

ಹಿರಿಯ ಶಾಸಕ ಜಿ. ಸುಧಾಕರನ್ ಅವರನ್ನು ಹಂಗಾಮಿ ಸ್ಪೀಕರ್ ಆಗಿ ಸಚಿವ ಸಂಪುಟ ಶಿಫಾರಸು ಮಾಡಿ, ಶಾಸಕರ ಪ್ರಮಾಣವಚನ ಮತ್ತು ಸ್ಪೀಕರ್ ಆಯ್ಕೆಗಾಗಿ ವಿಧಾನಸಭೆಯನ್ನು ಕರೆಯುವಂತೆ ರಾಜ್ಯಪಾಲರನ್ನು ಕೋರಿದೆ.ಸರಕಾರ ಘೋಷಿಸಿದ ವೇಳಾಪಟ್ಟಿಯ ಪ್ರಕಾರ, ಶಾಸಕರು ಮೇ 21 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಮತ್ತು ಸ್ಪೀಕರ್ ಅವರನ್ನು ಮೇ 22 ರಂದು ಆಯ್ಕೆ ಮಾಡಲಾಗುವುದು ಎಂದು ಸಿಎಂ ಹೇಳಿದರು.ಹಿರಿಯ ವಕೀಲ ರಾಜೀವ್ ಬಾಬು ಅವರನ್ನು ಅಡ್ವಕೇಟ್ ಜನರಲ್ ಆಗಿ ಮತ್ತು ವಕೀಲ ಟಿ.ಎಸ್. ಅಸಫ್ ಅಲಿ ಅವರನ್ನು ಪ್ರಾಸಿಕ್ಯೂಷನ್ ಮಹಾನಿರ್ದೇಶಕರನ್ನಾಗಿ ಸಚಿವ ಸಂಪುಟ ನೇಮಿಸಿದೆ.
ಮಾರ್ಚ್ನಲ್ಲಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸುವಾಗ ರಾಹುಲ್ ಗಾಂಧಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದರು ಮಹಿಳೆಯರಿಗೆ ಉಚಿತ ಕೆಎಸ್ಆರ್ಟಿಸಿ ಬಸ್ ಪ್ರಯಾಣ, ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಮಾಸಿಕ 1,000 ರೂ.ಸ್ಟೈಫಂಡ್, ಕಲ್ಯಾಣ ಪಿಂಚಣಿ 3,000ರೂ.ಗೆ ಹೆಚ್ಚಳ, ಪ್ರತಿ ಮನೆಗೆ ರೂ. 25 ಲಕ್ಷದವರೆಗೆ ಆರೋಗ್ಯ ವಿಮಾ ರಕ್ಷಣೆ ಮತ್ತು ಯುವ ಉದ್ಯಮಿಗಳಿಗೆ ರೂ. 5 ಲಕ್ಷದವರೆಗೆ ಬಡ್ಡಿರಹಿತ ಸಾಲ.ಅದನ್ನು ಯುಡಿಎಫ್ ಚುನಾವಣಾ ಪ್ರಣಾಳಿಕೆಯ ಭಾಗವನ್ನಾಗಿಸಲಾಗಿತ್ತು.













