ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಭವ್ಯ ರಾಮಮಂದಿರಕ್ಕೆ ಭಕ್ತರಿಂದ ಭರ್ಜರಿಯಾಗಿ ದೇಣಿಗೆ ಹರಿದು ಬರಲಾರಂಭಿಸಿದೆ. ದೇಣಿಗೆ ಸಂಗ್ರಹ ಆರಂಭವಾದ ಮೂರೇ ದಿನಗಳಲ್ಲಿ ಅಂದಾಜು 100 ಕೋಟಿ ರೂ. ಹಣ ಸಂಗ್ರಹವಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ರವರು ತಿಳಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ರಾಯ್ ‘ದೇಶದ ವಿವಿಧೆಡೆ ಸಂಗ್ರಹವಾದ ಹಣ ಇನ್ನೂ ಪೂರ್ಣ ಪ್ರಮಾಣದಲ್ಲಿ ಟ್ರಸ್ಟ್ನ ಕೇಂದ್ರ ಕಚೇರಿ ತಲುಪಿಲ್ಲ. ಆದರೆ ನಮ್ಮ ಕಾರ್ಯಕರ್ತರು ನೀಡಿರುವ ಮಾಹಿತಿ ಅನ್ವಯ ಈವರೆಗೆ 100 ಕೋಟಿ ರೂ. ಆಸುಪಾಸಿನಷ್ಟು ಹಣ ಸಂಗ್ರಹವಾಗಿದೆ’ ಎಂದಿದ್ದಾರೆ.

ಸಂಪೂರ್ಣವಾಗಿ ಭಕ್ತರ ದೇಣಿಗೆ ಹಣದಿಂದಲೇ ರಾಮಮಂದಿರ ದೇಗುಲ ಮತ್ತು ದೇಗುಲ ಸಂಕೀರ್ಣವನ್ನು ನಿರ್ಮಿಸುವ ಉದ್ದೇಶವನ್ನು ಟ್ರಸ್ಟ್ ಹೊಂದಿದೆ. ಇದಕ್ಕಾಗಿ ಸಂಕ್ರಾತಿ ದಿನವಾದ ಜ.14 ರಿಂದ ಫೆ.27ರವರೆಗೆ ದೇಶವ್ಯಾಪಿ ದೇಣಿಗೆ ಸಂಗ್ರಹದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ರಾಮಮಂದಿರಕ್ಕೆ 300 ರಿಂದ 400 ಕೋಟಿ ರೂ. ಮತ್ತು ಒಟ್ಟಾರೆ ರಾಮಮಂದಿರ ಸಂಕೀರ್ಣಕ್ಕೆ 1,100 ಕೋಟಿ ರೂ. ವೆಚ್ಚವಾಗುವ ಸಾಧ್ಯತೆ ಇದೆ ಎಂದು ಟ್ರಸ್ಟ್ ಅಂದಾಜಿಸಿದೆ.

