ವಿಟ್ಲ: ಮಂಗಲಪದವು ಕೈಂತಿಲ ನಿವಾಸಿ ಮಿಥುನ್ ಕುಮಾರ್ ಅಗ್ನಿವೀರ್ ಮೂಲಕ ಭಾರತದ ಸೈನ್ಯಕ್ಕೆ ಆಯ್ಕೆಯಾಗಿದ್ದಾರೆ. ಕಡು ಬಡತನದಲ್ಲಿ ಬೆಳೆದ ಮಿಥುನ್ ಕುಮಾರ್ ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣದ ನಂತರ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣ ಆದ ನಂತರ ತಾನು ಭಾರತೀಯ ಸೇನೆಗೆ ಸೇವೆಯನ್ನು ಸಲ್ಲಿಸಬೇಕೆಂಬ ಕನಸನ್ನು ಕಂಡರು.
ತದನಂತರ ಸೇನೆಯನ್ನು ಸೇರಲು ಬೇಕಾದ ಆರ್ಹತೆಯನ್ನು ಗಿಟ್ಟಿಸಲು ಬೇಕಾದ ಅಭ್ಯಾಸವನ್ನು ಮಾಡಿಕೊಂಡು ಪ್ರಯತ್ನಿಸುತ್ತಿರುತ್ತಾರೆ. ಮೊದಲ ಬಾರಿ ಅಗ್ನಿವೀರ್ ಆಯ್ಕೆಯಲ್ಲಿ ವಿಫಲಗೊಂಡಾಗ ನಿರಾಸೆಗೊಳ್ಳದೆ ಮತ್ತೋಮ್ಮೆ ಪ್ರಯತ್ನವನ್ನು ಮಾಡಿ ಕಠಿಣ ಅಭ್ಯಾಸ, ಪರಿಶ್ರಮದ ಮೂಲಕ ಎರಡನೆಯ ಪ್ರಯತ್ನದಲ್ಲಿ ಸಫಲಗೊಂಡು ಇದೀಗ ಭಾರತೀಯ ಭೂಸೇನೆಗೆ ಆಯ್ಕೆಯಾಗಿದ್ದಾರೆ.ಇವರ ಟ್ರೈನಿಂಗ್ ಉತ್ತರಪ್ರದೇಶದ ಲಕ್ನೋದಲ್ಲಿ ನಡೆಯಲಿದೆ.
ಪಿಯುಸಿ ವಿದ್ಯಾಭ್ಯಾಸ ಅನುತ್ತೀರ್ಣ ಆದ ನಂತರ ತನ್ನ ಜೀವನಕ್ಕಾಗಿ ಶಾಮಿಯಾನದ ಕೆಲಸವನ್ನು ಮಾಡಿಕೊಂಡಿದ್ದ ಯುವಕ ಇಂದು ಅಗ್ನಿವೀರ್ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ಇವರ ತಾಯಿ ಶಶಿಕಲಾ ಕೂಲಿ ಕೆಲಸ ಮಾಡಿಕೊಂಡು ತಮ್ಮ ಮಗನ ಆಸೆಗೆ ಪೂರಕವಾಗಿ ಬೆಳೆಸಿದ್ದಾರೆ ಇಂದು ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.