ಕುಂದಾಪುರ: ಕೊಲ್ಲೂರಿನ ಸಮೀಪದಲ್ಲಿರುವ ಅರಿಶಿನಗುಂಡಿ ಫಾಲ್ಸ್ಗೆ ಕಾಲು ಜಾರಿ ಬಿದ್ದಿದ್ದ ಯುವಕ ಶರತ್ ಮೃತದೇಹ ಇಂದು ಪತ್ತೆಯಾಗಿದೆ. ಕಳೆದೊಂದು ವಾರದಿಂದ ಶರತ್ ಮೃತದೇಹ ಪತ್ತೆಗಾಗಿ ನಿರಂತರ ಶೋಧ ಕಾರ್ಯ ನಡೆಸಲಾಗಿದ್ದು ಇಂದು ಆತನ ಮೃತದೇಹ ಪತ್ತೆ ಮಾಡುವಲ್ಲಿ ರಕ್ಷಣಾ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ.
ಜುಲೈ 23ರಂದು ಸ್ಥಳೀಯರ ಕಣ್ತಪ್ಪಿಸಿ ಅರಿಶಿನಗುಂಡಿ ಫಾಲ್ಸ್ಗೆ ತೆರಳಿದ್ದ ಶರತ್ ಜಲಪಾತದ ಬಳಿ ನಿಂತು ರೀಲ್ಸ್ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದಿದ್ದರು. ಜಲಪಾತದ ಪಕ್ಕದ ಬಂಡೆ ಕಲ್ಲಿನ ಮೇಲೆ ನಿಂತಿದ್ದು ಅವರು ಜಾರಿ ನೀರಿಗೆ ಬಿದ್ದಿದ್ದರು. ಶರತ್ ಹುಡುಕಾಟಕ್ಕೆ ಹಲವು ತಂಡಗಳು ವಾರಗಳ ಕಾಲ ಶ್ರಮ ವಹಿಸಿದ್ದವು. ಆದರೆ ತೀವ್ರ ಮಳೆ ಮತ್ತು ನೀರಿನ ರಭಸದ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿತ್ತು. ಇದೀಗ ವಾರದ ಬಳಿಕ ಜುಲೈ 30ರಂದು ಬಿದ್ದ ಜಾಗದಿಂದ ಹತ್ತು ಮೀಟರ್ ದೂರದಲ್ಲಿ ಶವ ಪತ್ತೆಯಾಗಿದೆ ಎಂದು ವರದಿಯಾಗಿದೆ.
ನಿರ್ವಹಣ ತಂಡ (ಎಸ್ಡಿಆರ್ಎಫ್), ಅರಣ್ಯ ಇಲಾಖೆ ಸಿಬಂದಿ, ಅಗ್ನಿ ಶಾಮಕ ದಳದ ಸಿಬಂದಿ ಸ್ಥಳೀಯರು, ಶರತ್ ಅವರ ಸ್ನೇಹಿತರು, ಸಂಬಂಧಿಕರು ಪ್ರತೀ ದಿನ ಹಗಲಿಡೀ ನಿರಂತರ ಹುಡುಕಾಟ ನಡೆಸಿದ್ದರು. ಈಶ್ವರ್ ಮಲ್ಪೆ, ಜ್ಯೋತಿರಾಜ್ ತಂಡವೂ ಹುಡುಕಾಟ ನಡೆಸಿತ್ತು. ಶರತ್ ಪತ್ತೆಗಾಗಿ ಜಲಪಾತ ಹರಿದು ಬರುವ ಬೇರೆ ಬೇರೆ ಕಡೆಗಳಲ್ಲಿ ಸಾಗರ ಬಾರಕೂರು ಅವರ ನೇತೃತ್ವದಲ್ಲಿ ಡೋನ್ ಕೆಮರಾದ ಮೂಲಕ ಹುಡುಕುವ ಪ್ರಯತ್ನ ಮಾಡಲಾಗಿತ್ತು.