


ಕಾಪು : ದರೋಡೆಗೆ ಸಂಚು ರೂಪಿಸಿ ಕಾರಿನಲ್ಲಿ ಮಾರಕಾಯಧಗಳೊಂದಿಗೆ ಸಂಚರಿಸುತ್ತಿದ್ದ ಆರೋಪದಲ್ಲಿ ಆರು ಮಂದಿಯನ್ನು ಕಾಪು ಪೊಲೀಸರು ಶನಿವಾರ ಸಂಜೆ ಕಾಪು ಸಮೀಪದ ಕೋತಲಕಟ್ಟೆ ಎಂಬಲ್ಲಿ ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಲ್ಕಿಯ ಅಮಿತ್ ರಾಜ್, ಕಾಟಿಪಳ್ಳದ ಪ್ರಕಾಶ್, ವಾಮಂಜೂರು ನೀರುಮಾರ್ಗದ ವರುಣ್, ಸುರತ್ಕಲ್ನ ಕಾರ್ತಿಕ್ ಶೆಟ್ಟಿ, ಕಾಟಿಪಳ್ಳದ ಅಭಿಷೇಕ್ ಮತ್ತು ಫರಂಗಿಪೇಟೆಯ ಶ್ರೀಕಾಂತ್ ಶ್ರೀಪತಿ ಬಂಧಿತ ಆರೋಪಿಗಳು.
ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಕಾಪು ಸಿಐ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಸ್ಕಾರ್ಪಿಯೋ ಕಾರೊಂದು ನಿಂತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಕಾರ್ಪಿಯೋ ಬಳಿಗೆ ಬಂದು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಪ್ರಾಣಕ್ಕೆ ಮಾರಕವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು. ಅವರು ತತ್ ಕ್ಷಣ ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಎಸೈ ಅಬ್ದುಲ್ ಖಾದರ್ ನೇತೃತ್ವದ ತಂಡ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರನ್ನು ತಪಾಸಣೆ ಮಾಡಿದಾಗ ಮಾರಕಾಯುಧಗಳು, ಖಾರದ ಪುಡಿ ಸಹಿತ ಇತರ ವಸ್ತುಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಕಾರಿನಲ್ಲಿದ್ದ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ದರೋಡೆ ಕೃತ್ಯಕ್ಕೆ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ತೆರಳುತ್ತಿದ್ದರೆನ್ನಲಾಗಿದೆ. ಬಂಧಿತರ ಪೈಕಿ ಓರ್ವ ಎರಡು ವರ್ಷಗಳ ಹಿಂದೆ ಸುರತ್ಕಲ್ನಲ್ಲಿ ನಡೆದ ಮಂಗಳಪೇಟೆಯ ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಎಂದು ತಿಳಿದುಬಂದಿದೆ.