



ಗಾನಕೋಗಿಲೆ ಎಸ್. ಜಾನಕಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಪೋಸ್ಟ್ನಲ್ಲಿ, ‘ಎಸ್. ಜಾನಕಿ ಅಮ್ಮ ಅವರ ನಿಧನ ಸಂಗೀತ ಮತ್ತು ಸಂಸ್ಕೃತಿ ಲೋಕಕ್ಕೆ ತುಂಬಲಾರದ ನಷ್ಟ. ಹಲವು ಭಾಷೆಗಳಲ್ಲಿ ಅವರು ಹಾಡಿದ ಗೀತೆಗಳು ತಲೆಮಾರುಗಳ ಮನಸ್ಸು ಗೆದ್ದಿವೆ. ಪ್ರತಿಯೊಂದು ಭಾವನೆಗೂ ತಮ್ಮ ಧ್ವನಿಯ ಮೂಲಕ ಜೀವ ತುಂಬಿದ್ದರು. ಅವರ ಹಾಡುಗಳು ಮುಂದಿನ ಪೀಳಿಗೆಯನ್ನೂ ಮೋಡಿ ಮಾಡುತ್ತಲೇ ಇರುತ್ತವೆ. ಅವರ ಕುಟುಂಬ, ಅಭಿಮಾನಿಗಳು ಮತ್ತು ಸಂಗೀತ ಲೋಕದ ಎಲ್ಲರಿಗೂ ನನ್ನ ಸಂತಾಪ. ಓಂ ಶಾಂತಿ’ ಎಂದು ಬರೆದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು, ‘ಜಾನಕಿ ಅಮ್ಮ ಅವರ ಅಗಲಿಕೆಯಿಂದ ಭಾರತ ಸಂಗೀತ ಲೋಕದ ಅಮೂಲ್ಯ ಧ್ವನಿಯನ್ನು ಕಳೆದುಕೊಂಡಿದೆ. ಆರು ದಶಕಗಳಿಗೂ ಹೆಚ್ಚು ಕಾಲದ ಸಂಗೀತ ಪಯಣದಲ್ಲಿ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರ ಅಮೋಘ ಗಾಯನ ಹಲವು ತಲೆಮಾರುಗಳನ್ನು ರಂಜಿಸಿದೆ. ಅವರ ಸಂಗೀತ ಎಂದೆಂದಿಗೂ ಅಮೂಲ್ಯವಾಗಿ ಉಳಿಯಲಿದೆ. ಅವರ ಕುಟುಂಬ ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ನನ್ನ ಸಂತಾಪ’ ಎಂದು ಪೋಸ್ಟ್ ಮಾಡಿದ್ದಾರೆ.
ಜಾನಕಿ ಅಮ್ಮ ಅವರ ನಿಧನಕ್ಕೆ ದೇಶದ ಗಣ್ಯರು, ಸಂಗೀತ ಕ್ಷೇತ್ರದವರು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಅವರ ಧ್ವನಿ ಸದಾ ಸಂಗೀತ ಪ್ರೇಮಿಗಳ ಹೃದಯದಲ್ಲಿ ಜೀವಂತವಾಗಿರಲಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.








