ಪುತ್ತೂರು: ಪುತ್ತೂರು ಅರಣ್ಯ ಸಂಚಾರಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಳಿವಿನಂಚಿನಲ್ಲಿರುವ ಇರ್ತಲೆ ಹಾವಿನ ಮಾರಾಟ ಜಾಲವೊಂದನ್ನು ಪತ್ತೆ ಮಾಡಿ ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ಇರ್ತಲೆ ಹಾವನ್ನು ರಕ್ಷಣೆ ಮಾಡಿದ ಘಟನೆ ಸುಳ್ಯ ತಾಲೂಕಿನ ಮಂಡೆಕೋಲಿನ ಮೂರೂರಿನಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪುತ್ತೂರು ಅರಣ್ಯ ಸಂಚಾರಿ ಪೊಲೀಸ್ ಉಪನಿರೀಕ್ಷಕಿ ಜಾನಕಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಕಾಸರಗೋಡು ಕಡೆಯಿಂದ ಸುಳ್ಯ ಕಡೆ ಹೋಗುತ್ತಿದ್ದ ಎರಡು ಮಾರುತಿ ಸ್ವಿಫ್ಟ್ ಕಾರನ್ನು ಸುತ್ತುವರಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನ ಸೀಟಿನಲ್ಲಿದ್ದ ಬ್ಯಾಗ್ವೊಂದರಲ್ಲಿ ಇರ್ತಲೆ ಹಾವು ಇರುವುದು ಕಂಡು ಬಂದಿದ್ದು, ತಕ್ಷಣ ಎರಡು ಕಾರಿನಲ್ಲಿದ್ದ ಆರೋಪಿಗಳಾದ ಕಾಸರಗೋಡು ಮೂಲದವರಾದ ಆಶ್ರಫ್, ರಾಜೇಶ್, ರಮೇಶ್, ಜಬ್ಬಾರ್, ನಿತಿನ್ ಅವರನ್ನು ಬಂಧಿಸಿದ್ದು, ಆರೋಪಿಗಳಿಂದ ನಗದು ಕೌಂಟಿಂಗ್ ಮೆಷಿನ್ವೊಂದನ್ನು ವಶಕ್ಕೆ ತೆಗೆದುಕೊಂಡು ಇರ್ತಲೆ ಹಾವನ್ನು ರಕ್ಷಣೆ ಮಾಡಲಾಗಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿ ದಳದ ಉಪನಿರೀಕ್ಷಕಿ ಜಾನಕಿ, ಸಿಬ್ಬಂದಿಗಳಾದ ವಿಜಯ ಕುಮಾರ್, ಸುಂದರ ಶೆಟ್ಟಿ, ಉದಯ ಕುಮಾರ್, ಸಂತೋಷ್, ಸರಸ್ವತಿ ಅವರು ಪಾಲ್ಗೊಂಡಿದ್ದರು.