ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಡಿ ಪುರಾಣ ಕೋಲಾಹಲ ಎಬ್ಬಿಸಿರೋದು ಗೊತ್ತೇ ಇದೆ. ಇದೀಗ ಮತ್ತೆ ಅಂತಹದ್ದೇ ಸುದ್ದಿ ಕೇಳಿಬಂದಿದೆ. ಸಚಿವ ಸೋಮಶೇಖರ್ ಮಗನ ಅಶ್ಲೀಲ ವಿಡೀಯೋ ಇದೆ. ಹಣ ನೀಡದೇ ಇದ್ದರೆ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ ಘಟನೆ ನಡೆದಿದ್ದು ಖದೀಮ ಜೈಲು ಸೇರಿದ್ದಾನೆ.
ಸಚಿವ ಸೋಮಶೇಖರ್ ಪುತ್ರ ನಿಶಾಂತ್’ಗೆ ಕರೆ ಮಾಡಿದ ಭೂಪ ಅಶ್ಲೀಲ ವೀಡಿಯೋ ಇದೆಯೆಂದು ಬ್ಲಾಕ್ ಮೇಲ್ ಮಾಡುತ್ತಿದ್ದ. ಅಪರಿಚಿತರಿಂದ ನಕಲಿ ವಿಡಿಯೋ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡುತ್ತಿರುವ ಜ್ಯೋತಿಷಿ ಒಬ್ಬನ ಪುತ್ರ ರಾಹುಲ್ ಭಟ್ (22) ಹಣ ನೀಡದಿದ್ದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದ. ಈತನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಿಶಾಂತ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದರು.
ಆರ್.ಟಿ. ನಗರದ ಜ್ಯೋತಿಷಿಯೊಬ್ಬರ ಪುತ್ರನಾಗಿರುವ ರಾಹುಲ್ ಭಟ್’ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗಾಗಿ 5 ದಿನ ಪೊಲೀಸ್ ವಶಕ್ಕೆ ನೀಡಲಾಗಿದೆ. ಡಿಸೆಂಬರ್ 25ರಂದು ಸಚಿವರ ಆಪ್ತ ಸಹಾಯಕರಿಗೆ ವಿಡಿಯೋ ಕಳುಹಿಸಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು. ನಿಶಾಂತ್ ದೂರು ಆಧರಿಸಿ ಎಫ್ಐಆರ್ ದಾಖಲಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.