ಮಂಗಳೂರು: ವಿಮಾನಗಳಲ್ಲಿ ಬಳಸುವ ದುಬಾರಿ ಪೆಟ್ರೋಲ್ಗೆ ಸೀಮೆಎಣ್ಣೆ ಕಲಬೆರಕೆ ಮಾಡಿ ಪೆಟ್ರೋಲ್ ಕಳ್ಳತನ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ ಸುರತ್ಕಲ್ ಸಮೀಪದ ಬಾಳ ಪ್ರದೇಶದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಪೆಟ್ರೋಲ್ 2 ಟ್ಯಾಂಕರ್, ಪಿಕಪ್ ಸಹಿತ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಸೋಮವಾರ ಸಂಜೆ ಖಚಿತ ಮಾಹಿತಿಯ ಮೇರೆಗೆ ಬಾಳ ಒಟ್ಟೆಕಾಯರ್ ತಿರುವು ಬಳಿ ದಾಳಿ ನಡೆಸಿದಾಗ ಗುಪ್ತವಾಗಿ ನಿರ್ಮಿಸಿದ ಅಂಡರ್ ಟ್ಯಾಂಕ್ ಒಂದು ಪತ್ತೆಯಾಗಿದೆ. ಎರಡು ಟ್ಯಾಂಕರ್ಗಳಿಂದ ಪೆಟ್ರೋಲ್ ಅನ್ನು ಭೂಗತ ಟ್ಯಾಂಕ್ಗೆ ತುಂಬಿಸಿ ಬಳಿಕ ಟ್ಯಾಂಕರ್ಗೆ ಸೀಮೆಎಣ್ಣೆಯನ್ನು ರಾಸಾಯನಿಕ ಬಳಸಿ ಮಿಶ್ರಣ ಮಾಡಲಾಗುತ್ತಿತ್ತು.
ಕಾರ್ಯಾಚರಣೆಯಲ್ಲಿ ಆಹಾರ ಇಲಾಖೆಯ ಮಾಣಿಕ್ಯ, ಚೇತನ್, ಉಪತಹಶೀಲ್ದಾರ್ ನವೀನ್, ಸುರತ್ಕಲ್ ಎಸ್ಐ ಪುನೀತ್ ಗಾಂವ್ಕರ್ ಮತ್ತಿತರರು ಪಾಲ್ಗೊಂಡಿದ್ದರು. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 40 ಲಕ್ಷ ರೂ. ಮೌಲ್ಯದ 2 ಟ್ಯಾಂಕರ್, 12 ಲಕ್ಷ ರೂ.ಮೌಲ್ಯದ ಪಿಕಪ್, ಲಕ್ಷಾಂತರ ರೂ. ಮೌಲ್ಯದ 16 ಸಾವಿರ ಲೀಟರ್ ಎಟಿಎಫ್ ಪೆಟ್ರೋಲ್ ಹಾಗೂ ಡ್ರಮ್ಗಳು, ಒಂದು ಜನರೇಟರ್ ಅನ್ನು ವಶಕ್ಕೆ ಪಡೆಯಲಾಗಿದೆ.