ಬೆಂಗಳೂರು: ಎಸ್ಸಿಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆಯ ಮೇಲಿನ ನಿರ್ಬಂಧಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದಕ್ಕೆ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ತುಮಕೂರಿನ ಬಿ. ದಾಸಪ್ಪ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸರ್ಕಾರ ಮಂಜೂರು ಮಾಡಿರುವ ಭೂಮಿಯನ್ನು ಪ್ರಾಧಿಕಾರದ ಒಪ್ಪಿಗೆ ಪಡೆಯದೆ ವರ್ಗಾವಣೆ ಮಾಡುವುದನ್ನು ಕಾಯ್ದೆಯ ಸೆಕ್ಷನ್ 6ರಲ್ಲಿ ನಿರ್ಬಂಧಿಸಲಾಗಿದೆ. ಹಾಗಾಗಿ ಈ ಸೆಕ್ಷನ್ ಅನುಷ್ಠಾನಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
1924ರಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಭೂ ಒಡೆತನದ ಹಕ್ಕನ್ನು ಮೈಸೂರು ಅರಸರು ನೀಡಿದ್ದರು. ಸ್ವಾತಂತ್ರ್ಯ ಬರುವ ಮೊದಲು ರಾಜರು, ಸ್ವಾತಂತ್ರ್ಯದ ನಂತರ ಸರ್ಕಾರಗಳು ಮುಫ್ತಾಗಿ ನೀಡಿದ ಭೂಮಿಯನ್ನು ನಿರ್ದಿಷ್ಟ ಕಾಲದವರೆಗೆ ಪರಭಾರೆ ಮಾಡಬಾರದು ಎಂಬ ಷರತ್ತನ್ನು ವಿಧಿಸುತ್ತಿದ್ದರು.