


ಬೀದರ್: ವೇಶ್ಯಾವಾಟಿಕೆಗೆ ತಳ್ಳಲು ಪ್ರಯತ್ನಿಸಿದ ಅತ್ತೆಯ ಕಿರುಕುಳ ತಾಳಲಾರದೆ, 11 ತಿಂಗಳ ಮಗುವನ್ನು ಬಿಟ್ಟು ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ನಡೆದಿದೆ.
2022ರಲ್ಲಿ ಬಸವಕಲ್ಯಾಣದ ನಿವಾಸಿ, ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಶೇಖರ್ ಪಾನಿಪುರಿ ವ್ಯಾಪಾರಿ ಆಗಿದ್ದ ಎನ್ನಲಾಗಿದೆ. ಗಂಡ ರಾತ್ರಿ ತಡವಾಗಿ ಮನೆಗೆ ಬರುತ್ತಿದ್ದು, ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದು ಹೇಳಿದ್ದಳು. ಇದೇ ವಿಚಾರಕ್ಕೆ ಅತ್ತೆ ಮಾವನೂ ಆಕೆ ಜತೆ ಕಿರಿಕ್ ಮಾಡುತ್ತಿದ್ದರು. ಅತ್ತೆ ತನ್ನ ಸೊಸೆಗೆ, ನಿನಗೆ ಅಡುಗೆ ಬರಲ್ಲ. ನೋಡೋಕೆ ಚೆನ್ನಾಗಿಲ್ಲ ಎಂದೆಲ್ಲಾ ಹೀಯಾಳಿಸಿ, ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದರು ಎನ್ನಲಾಗಿದೆ. ಈ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಸಹಿಸಿಕೊಳ್ಳಲಾಗದ ಗೃಹಿಣಿ, ಬೇರೆ ದಾರಿಯಿಲ್ಲದೆ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಕೇವಲ 11 ತಿಂಗಳ ಹಸುಗೂಸನ್ನು ಅಗಲಿ ತಾಯಿ ಸಾವನ್ನಪ್ಪಿರುವುದು ಕುಟುಂಬದಲ್ಲಿ ತೀವ್ರ ಶೋಕವನ್ನುಂಟು ಮಾಡಿದೆ.
ಈ ಕುರಿತು ಆಕೆಯ ತಂದೆ ನೀಡಿದ ದೂರಿನ ಅನ್ವಯ ಬಸವಕಲ್ಯಾಣ ಪಟ್ಟಣ ಪೊಲೀಸರು ಮೃತಳ ಗಂಡ ಶೇಖರ್ ಸೇರಿ ಮೂವರ ವಿರುದ್ಧ ದೂರು ದಾಖಲಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎ0ದು ವರದಿ ಮೂಲಕ ತಿಳಿದು ಬಂದಿದೆ.








