ಪುತ್ತೂರು: ತನ್ನ ಪತಿಗೆ ಅನ್ಯ ಸ್ತ್ರೀ ಜೊತೆಗೆ ಸಂಬಂಧವಿದೆ ಎಂದು ಆರೋಪಿಸುತ್ತಿದ್ದ ಮಹಿಳೆಯೊಬ್ಬರು ತಾವೂ ವಿಷ ಸೇವಿಸಿ ಮಕ್ಕಳಿಗೂ ಜ್ಯೂಸ್ ನಲ್ಲಿ ವಿಷ ಹಾಕಿ ನೀಡಿ ಆತ್ಮಹತ್ಯೆಗೆ ಯತ್ನಿಸಿರುವ ಆತಂಕಕಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪಳ್ಳಿ ಎಂಬಲ್ಲಿ ನಡೆದಿದೆ.
ಘಟನೆಯಿಂದಾಗಿ 8 ವರ್ಷದ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ತಿಳಿದು ಬಂದಿದೆ. ಪಡುವನ್ನೂರು ಗ್ರಾಮದ ಸಂಜಕಾರಿ ನಿವಾಸಿ ರಘುನಾಥ ಎಂಬಾತನ ಪತ್ನಿ ದಿವ್ಯಶ್ರೀ(29), ಹಾಗೂ ಇಬ್ಬರು ಮಕ್ಕಳಾದ ಅಜಯ್ (10), ಅನ್ವಿತಾ(8) ಅವರಿಗೆ ಜ್ಯೂಸ್ ನಲ್ಲಿ ವಿಷ ಬೆರೆಸಿ ನೀಡಿದ್ದಾಳೆ ಬಳಿಕ ತಾನೂ ಸೇವಿಸಿದ್ದಾಳೆ ಎಂದು ವರದಿಯಾಗಿದೆ.
ತನ್ನ ಪತಿಗೆ ಅನ್ಯ ಸ್ತ್ರೀ ಜೊತೆಗೆ ಸಂಬಂಧವಿದೆ ಎಂದು ದಿವ್ಯಶ್ರೀ ತೀವ್ರವಾಗಿ ನೊಂದಿದ್ದಳು. ಲಾಕ್ ಡೌನ್ ಸಂದರ್ಭದಲ್ಲಿ ತನ್ನ ಮಕ್ಕಳನ್ನು ಕರೆದುಕೊಂಡು ಸಂಬಂಧಿಯೊಬ್ಬರ ಮನೆಯಲ್ಲಿದ್ದರು. ಈ ನಡುವೆ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಸೆ.16ರಂದು ಜ್ಯೂಸ್ ನಲ್ಲಿ ವಿಷ ಬೆರೆಸಿ ಮಕ್ಕಳಿಗೆ ನೀಡಿ ಬಳಿಕ ತಾನೂ ಕುಡಿದು ಸಂಬಂಧಿಕರ ಮನೆಗೆ ಹೋಗಿದ್ದರು. ಸೆ.18ರಂದು ಬಾಲಕಿ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾಳೆ ಈ ವೇಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬಾಲಕಿ ಮೃತಪಟ್ಟಿದ್ದಾಳೆ. ಈ ಬಗ್ಗೆ ಪತಿ ರಘುನಾಥ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.