ಸುಳ್ಯ: ಬೈಕೊಂದು ಸ್ಕಿಡ್ ಆಗಿ ಬಿದ್ದ ಸಮಯದಲ್ಲಿ ರಕ್ಷಣೆಗೆ ಬಂದ ಸ್ಥಳೀಯರು ಪರಿಶೀಲನೆ ನಡೆಸಿದ ಸಮಯದಲ್ಲಿ ಸವಾರ ಕೊಂಡೊಯ್ಯುತ್ತಿದ್ದ ಮದ್ಯದ ಪ್ಯಾಕೆಟ್ ಗಳು ರಾಶಿಯಾಗಿ ಸಿಕ್ಕಿಬಿದ್ದ ಘಟನೆ ಕೊಲ್ಲಮೊಗ್ರದಲ್ಲಿ ನಡೆದಿದೆ.
ಸುಳ್ಯ ತಾಲೂಕಿನ ಹರಿಹರ- ಕೊಲ್ಲಮೊಗ್ರದ ನಿಲ್ಕೂರು ಬಳಿ ಬೈಕೊಂದು ಪಲ್ಟಿಯಾಗಿ ಸವಾರ ಗಾಯಗೊಂಡಿದ್ದು, ಈ ಸಮಯದಲ್ಲಿ ಬೈಕಲ್ಲಿ ಅಕ್ರಮವಾಗಿ ಮದ್ಯದ ಪ್ಯಾಕೆಟ್ ಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ.
ಬೈಕಿನ ಬಾಕ್ಸ್ ನಲ್ಲಿ ಮತ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ಮದ್ಯದ ಹಲವಾರು ಪ್ಯಾಕೆಟ್ ಗಳು ಇದ್ದುದು ಕಂಡುಬಂದಿದೆ. ಘಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸುಳ್ಯ ಅಬಕಾರಿ ಪೋಲೀಸರು ಬೈಕ್ ಮತ್ತು 13.300 ಲೀಟರ್ ಅಕ್ರಮ ಮದ್ಯವನ್ನು ವಶಕ್ಕೆ ಪಡೆದು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿ ಲೋಕನಾಥ್ ರೈ ಎಂಬವ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ಈ ವ್ಯಕ್ತಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಗ್ರಾಮಪಂಚಾಯತ್ ಗೆ ಸಾರ್ವಜನಿಕರು ದೂರು ನೀಡಿದ್ದರು ಎನ್ನಲಾಗಿದೆ. ದಾಳಿಯಲ್ಲಿ ಸುಳ್ಯ ಅಬಕಾರಿ ನಿರೀಕ್ಷಕ ಸಿದ್ದಪ್ಪ ಮೇಠಿ, ಸಿಬ್ಬಂದಿಗಳಾದ ಅಮರೇಶ್, ಅಶೋಕ, ಪ್ರಮೋದ್, ಮಲ್ಲನಗೌಡ ಸೂಳಿಭಾವಿ ಎಂಬವರು ಭಾಗವಹಿಸಿದ್ದರು.