ಸುಳ್ಯ: ಹಂದಿ ಬೇಟೆಗೆಂದು ಶಿಕಾರಿ ತೆರಳಿದ್ದ ವೇಳೆ ಕಾಡು ಪ್ರಾಣಿಗೆಂದು ಹಾರಿಸಿದ್ದ ಗುಂಡು ಜೊತೆಗಾರನಿಗೇ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.
ಅರಂತೋಡು ಬಳಿಯ ಅರಣ್ಯ ವಿಭಾಗದ ಪೂಮಲೆ ಬೆಟ್ಟದಲ್ಲಿ ನಾಲ್ವರು ರಾತ್ರಿ ಶಿಕಾರಿಗೆ ತೆರಳಿದ್ದರು. ಕಾಡಿಗೆ ತಲುಪಿದ ಬಳಿಕ ಹಂದಿಯನ್ನು ಅಟ್ಟಿಸಲೆಂದು ನಾಲ್ಕು ಕಡೆಗೆ ತೆರಳಿದ್ದು ಈ ಪೈಕಿ ಸತ್ಯಮೂರ್ತಿ ಎಂಬಾತನ ಮೇಲೆ ಗುಂಡೇಟು ಬಿದ್ದಿದೆ.
ಕಾಡು ಹಂದಿಯೆಂದು ಶಬ್ದ ಕೇಳಿಬಂದಿದ್ದ ಕಡೆಗೆ ಗುಂಡು ಹಾರಿಸಿದ್ದು ಅಲ್ಲಿ ಕುಳಿತಿದ್ದ ಸತ್ಯಮೂರ್ತಿ ಮೇಲೆ ಹಲವು ಸುತ್ತುಗಳ ಗುಂಡು ಬಿದ್ದಿದ್ದು, ನಾಡಕೋವಿಯ ಗುಂಡು ಎದೆ ಮತ್ತು ತಲೆಯ ಭಾಗಕ್ಕೆ ಬೀಳದ ಕಾರಣ ಆತ ಸಾವಿನಿಂದ ಬಚಾವಾಗಿದ್ದಾನೆ. ಆತನನ್ನು ತಕ್ಷಣವೇ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ರಾಧಾಕೃಷ್ಣ, ಗಣೇಶ್ ಮತ್ತು ಮೋನಪ್ಪ ಬಂಧಿತರು. ಬೇಟೆಗೆ ತೆರಳಿದ್ದ ನಾಲ್ವರು ಕೂಡಾ ಅರಂತೋಡು ನಿವಾಸಿಗಳಾಗಿದ್ದಾರೆ.